More

    ಬೆಟ್ಟದಲ್ಲಿ ಜಲ ಸಂವರ್ಧನೆ ಕಾರ್ಯವಾಗಲಿ

    ಶಿರಸಿ; ಬೆಟ್ಟ ವನೀಕರಣ ಯೋಜನೆ ರೂಪಿಸಬೇಕು. ಬೆಟ್ಟದಲ್ಲಿ ಜಲ ಸಂವರ್ಧನೆ ಕಾರ್ಯ ಕೈಗೊಳ್ಳಬೇಕು. ಬೆಟ್ಟ ರಕ್ಷಣಾ ಕವಚ ನಿರ್ಮಾಣ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳು ಜೀವ ವೈವಿಧ್ಯ ಮಂಡಳಿ ಆಯೋಜಿಸಿದ್ದ ಬೆಟ್ಟ ಅಭಿವೃದ್ಧಿ ಸಮಾಲೋಚನಾ ಸಭೆಯಲ್ಲಿ ಬೆಟ್ಟ ಬಳಕೆದಾರರಿಂದ ವ್ಯಕ್ತವಾದವು.

    ನಗರದ ಕದಂಬ ಮಾರ್ಕೆಟಿಂಗ್ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಬೆಟ್ಟ ಭೂಮಿಯ ಅಭಿವೃದ್ಧಿ ಸಂಬಂಧ ಹಲವು ಸಲಹೆಗಳು ಬೆಟ್ಟ ಬಳಕೆದಾರರಿಂದ ವ್ಯಕ್ತವಾದವು.

    ಜೀವ ವಿಜ್ಞಾನಿ ಪ್ರಭಾಕರ ಭಟ್ಟ ಮಾತನಾಡಿ, ಬೆಟ್ಟ ಅಭಿವೃದ್ಧಿ ಸಂಬಂಧ ಈವರೆಗಿನ ಪ್ರಯೋಗಗಳಲ್ಲಿನ ಎಲ್ಲ ನ್ಯೂನ್ಯತೆ ಅವಲೋಕಿಸಬೇಕು, ಯಶೋಗಾಥೆಗಳ ಪುನರ್ ಮನನ ಆಗಬೇಕು. ಗ್ರಾಮ ಅರಣ್ಯ ಸಮಿತಿಗಳ ಸಹಕಾರ ಪಡೆಯಬೇಕು. ಹಾಗಾದರೆ ಮಾತ್ರ ವ್ಯವಸ್ಥೆ ಸುಧಾರಣೆ ಸಾಧ್ಯ ಎಂದರು.

    ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಮಾತನಾಡಿ, ಸಾಮೂಹಿಕ ಬೆಟ್ಟ ವ್ಯವಸ್ಥೆ ನಿವಾರಿಸಿ ವೈಯಕ್ತಿಕವಾಗಿ ಬೆಟ್ಟದ ವಿಂಗಡಣೆ ಆಗುವ ಕಾರ್ಯವಾಗಬೇಕು. ಇಲ್ಲವಾದರೆ ಬೆಟ್ಟ ಅಭಿವೃದ್ಧಿಗೆ ನಿರಾಸಕ್ತಿ ಹೆಚ್ಚುತ್ತದೆ ಎಂದರು.

    ಸಾಮಾಜಿಕ ಕಾರ್ಯಕರ್ತ ನಾರಾಯಣ ಹೆಗಡೆ ಗಡೀಕೈ ಮಾತನಾಡಿ, ಈ ಹಿಂದೆ ರಸ್ತೆ ಪಕ್ಕ ಯಾರು ಮರ ನೆಡುತ್ತಾರೋ ಅಂಥವರಿಗೆ ಟ್ರೀ ಪಟ್ಟಾ ನೀಡಲಾಗುತ್ತಿತ್ತು. ಅದರಂತೆ ಬೆಟ್ಟ ಪ್ರದೇಶಕ್ಕೂ ಈ ಯೋಜನೆ ತಂದರೆ ಮರ ಬೆಳೆಸುವ ಆಸಕ್ತಿ ಹೆಚ್ಚುತ್ತದೆ ಎಂದರು.

    ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಬೆಟ್ಟ ಪ್ರದೇಶದಲ್ಲಿ ಇಂಗುಗುಂಡಿ ನಿರ್ವಿುಸುವ ಕಾರ್ಯವಾಗಬೇಕು. ಮುಳ್ಳು, ಪೊದೆಗಳನ್ನು ಉಳಿಸಿಕೊಳ್ಳಬೇಕು. ಹಣ್ಣಿನ ಗಿಡ ಬೆಳೆಸಬೇಕು ಎಂದರು.

    ಡಿಎಫ್​ಒ ಎಸ್.ಜಿ. ಹೆಗಡೆ ಮಾತನಾಡಿ, ಬೆಟ್ಟ ಪ್ರದೇಶ ರಕ್ಷಿತ ಅರಣ್ಯವಾಗಿದೆ. ರೈತರಿಗೆ ಬೆಟ್ಟ ಹಂಚಿಕೆ ಮಾಡಿದ್ದು ಕಂದಾಯ ಇಲಾಖೆ. ಅರಣ್ಯ ಇಲಾಖೆಗೆ ಈ ಕುರಿತು ಯಾವುದೇ ಸಂಬಂಧವಿಲ್ಲ. ಸೌಲಭ್ಯ ನೀಡುವ ವಿಚಾರದಲ್ಲಿ ಇಲಾಖೆ ಪಾರದರ್ಶಕವಾಗಿದೆ. ಹಾಗಾಗಿ ಬೆಟ್ಟವನ್ನು ಅದರ ಬಳಕೆದಾರರು ಯೋಗ್ಯ ರೀತಿ ಬಳಸಿಕೊಳ್ಳಬೇಕು ಎಂದರು.

    ಈ ವೇಳೆ ಬೆಟ್ಟ ನಿಯಮದ ಅಡಿ ಸುಸ್ಥಿರವಾಗಿ ಅರಣ್ಯ ಉಪ ಉತ್ಪನ್ನ ಪಡೆಯಬೇಕು. ಬೆಟ್ಟದಿಂದ ಬಂದ ಆದಾಯದಲ್ಲಿ ಶೇಕಡ 10ರಷ್ಟು ಹಣವನ್ನು ನವೀಕರಣಕ್ಕೆ ವೆಚ್ಚ ಮಾಡಬೇಕು. ಬೆಟ್ಟ ಸವರುವ ಪದ್ಧತಿ ಬಿಟ್ಟು ವೈವಿಧ್ಯ ಹೆಚ್ಚಿಸಲು ಗಮನ ನೀಡಬೇಕು. ಬೆಟ್ಟಕ್ಕೆ ಬೆಂಕಿ ಬೀಳದಂತೆ ಕ್ರಮ ಕೈಗೊಳ್ಳಬೇಕು. ಆಯುರ್ವೆದ ಕಾಲೇಜ್, ಅರಣ್ಯ, ಕೃಷಿ, ತೋಟಗಾರಿಕೆ ಕಾಲೇಜ್ ಇವರ ಸಹಕಾರದಲ್ಲಿ ಬೆಟ್ಟ ಅಭಿವೃದ್ಧಿಗೆ ಸಂಶೋಧನೆ, ಪ್ರಯೋಗ ನಡೆಸಬೇಕು. ಬೆಟ್ಟ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಬೆಂಬಲ ಪಡೆಯಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಬೆಟ್ಟ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಅಧ್ಯಕ್ಷತೆ ವಹಿಸಿದ್ದರು. ಕದಂಬ ಸಹಕಾರಿ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ, ಪ್ರಮುಖರಾದ ನರೇಂದ್ರ ಹೊಂಡಗಾಶಿ, ಶ್ರೀಧರ ಭಟ್ಟ, ಗಣೇಶ ಭಟ್ಟ, ಸಚ್ಚಿದಾನಂದ ಹೆಗಡೆ, ಜಿ.ವಿ. ಹೆಗಡೆ, ಗುರುಪಾದ ಹೆಗಡೆ, ಆರ್.ಎನ್. ಹೆಗಡೆ ಇತರರು ಇದ್ದರು.

    ಉತ್ತರ ಕನ್ನಡ ಜಿಲ್ಲೆಯಲ್ಲಿ 1.25 ಲಕ್ಷ ಎಕರೆ ಅರಣ್ಯವನ್ನು ರೈತರು ಹಲವು ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡಿದ್ದಾರೆ. ಆದರೆ, ಅದರ ಅಭಿವೃದ್ಧಿ ಆಗಬೇಕು. ಬೆಟ್ಟ ಬಳಕೆದಾರರಿಗೆ ಆದಾಯ ಹೆಚ್ಚಬೇಕು. ಸುಸ್ಥಿರ ಅಭಿವೃದ್ಧಿ ಕೂಡ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಪ್ರಯೋಗಗಳು ನಿರಂತರವಾಗಿ ನಡೆಯಬೇಕು.

    | ಅನಂತ ಅಶೀಸರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts