ರಾಣೆಬೆನ್ನೂರ: ಸೂಕ್ತ ದಾಖಲಾತಿ ನಿರ್ವಹಿಸದ ಒಂದು ಬೀಜದ ಅಂಗಡಿಗೆ ಬೀಗ ಜಡಿದ ಕೃಷಿ ಅಧಿಕಾರಿಗಳು, ಉಳಿದ ನಾಲ್ಕು ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇಲ್ಲಿಯ ಹರ್ಷಿತಾ ಹೈಬ್ರಿಡ್ ಸೀಡ್ಸ್ ಮಳಿಗೆ ಮಾಲೀಕರು ಪರವಾನಗಿ ಪತ್ರ, ದಾಸ್ತಾನು ವಿವರ ಹಾಗೂ ದರಪಟ್ಟಿ ಅಳವಡಿಸದೇ ವ್ಯಾಪಾರ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿದ್ದಾರೆ.
ನಂತರ ನಿರ್ವ ಹೈಬ್ರಿಡ್ ಸೀಡ್ಸ್ ಕಂಪನಿ., ಕೆ.ಬಿ. ಸೀಡ್ಸ್, ಶ್ರೀಸಾಯಿ ಅಗ್ರೋ ಸರ್ವಿಸ್ ಮತ್ತು ಬನಶಂಕರಿ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಇವರು ಸಹ ಅಗತ್ಯ ದಾಖಲೆ ನೀಡದ ಕಾರಣ ನೋಟಿಸ್ ಜಾರಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಖುಲ್ಲಾ ಬೀಜ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ, ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ, ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ ಮತ್ತಿತರರು ಪಾಲ್ಗೊಂಡಿದ್ದರು.