ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಇಂಟರ್ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ. ಏತನ್ಮಧ್ಯೆ ಪೆನ್ಡ್ರೈವ್ ಬಿಡುಗಡೆ ಮಾಡಿ ವಿಡಿಯೋದಲ್ಲಿರುವ ಮಹಿಳೆಯರ ಮಾನ ಹಾನಿ ಮಾಡಿದವರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಷಡ್ಯಂತ್ರ ಮಾಡಿದ್ದಾರೆಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪೋಟೋ ಒಳಗೊಂಡಂತೆ ಅವಹೇನಕಾರಿ ಪೋಸ್ಟರ್ ಗಳನ್ನು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಅಂಟಿಸಿ ಪ್ರತಿಭಟಿಸಲಾಗಿದೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ 196 ಸದಸ್ಯ ರಾಷ್ಟ್ರಗಳು ಸ್ಪಂಧಿಸಿವೆ. ಪ್ರಜ್ವಲ್ ರೇವಣ್ಣ ಏರ್ಪೋರ್ಟ್, ಬಂದರು, ಗಡಿಯಲ್ಲಿ ಕಾಣಿಸಿಕೊಂಡರೆ ಮಾಹಿತಿ ನೀಡುವಂತೆ ಸದಸ್ಯ ರಾಷ್ಟ್ರಗಳೊಂದಿಗೆ ಇಂಟರ್ ಪೋಲ್ ಅಧಿಕಾರಿಗಳು ಮನವಿ ಮಾಡಿದ್ದು, ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಎಸ್ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಯಾವುದೇ ಕ್ಷಣದಲ್ಲಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದು ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಎಂ, ಡಿಸಿಎಂ ವಿರುದ್ಧ ಪೋಸ್ಟರ್ ವಾರ್
ಬೆಂಗಳೂರಿನ ಬಸವೇಶ್ವನಗರ, ರಾಜಾಜಿನಗರ, ಸದಾಶಿವನಗರ ಸೇರಿ ವಿವಿಧ ಪ್ರದೇಶಗಳಲ್ಲಿ ರಾತ್ರೋರಾತ್ರಿ ಪೋಸ್ಟರ್ ಅಂಟಿಸಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಪೋಸ್ಟರ್ಗಳಲ್ಲಿ ಕಂಡು ಬಂದ ಬರಹಗಳು.
-ರಾಜಕೀಯಕ್ಕಾಗಿ ಮಕ್ಕಳ ಫೋಟೋವನ್ನೇ ಮಾರಾಟಕ್ಕಿಟ್ಟ ಲುಲು ಕುಮಾರ.
-ಸಿದ್ದರಾಮಯ್ಯ ನೀವು ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಸಿ.ಡಿಯನ್ನು ಆಚೆ ತರಲು ಹಿಂದೆಮುಂದೆ ನೋಡಲ್ಲ
– ಹೆಣ್ಣು ಮಕ್ಕಳ ಫೋಟೊ ಬಳಸಿ ರಾಜಕೀಯ ಬೋಸು ಡಿಕೆ ನಾನು
– ಹುಡುಗಿಯರ ವಿಡಿಯೋವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವವನು ಏನು? ಅವನು ಪಿಂಪ್ ಅಷ್ಟೆ.
– ಹೆಣ್ಣು ಮಕ್ಕಳ ಫೋಟೋಗಳನ್ನು ರಾಜಕೀಯಕ್ಕಾಗಿ ಬಳಸಿಕೊಂಡ ರಾಜಕೀಯ ವ್ಯಭಿಚಾರಿ
ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್ಐ ಡಿ.ಎಂ.ರಾಮಕೃಷ್ಣ, ಈ ಕುರಿತು ದೂರು ಸಲ್ಲಿಸಿದ್ದಾರೆ. ಬೆಳಗ್ಗೆ ಗಸ್ತು ಕರ್ತವ್ಯಕ್ಕೆ ಹಾಜರಾಗಿ ಠಾಣಾ ವ್ಯಾಪ್ತಿಯ ವಾಟಾಳ್ ನಾಗರಾಜ್ ರಸ್ತೆ ಮತ್ತು ಮೈಸೂರು ಡಿವಿಯೇಷನ್ ರಸ್ತೆಯಲ್ಲಿ ಗಸ್ತು ತಿರುಗುವಾಗ ‘ರಾಜಕೀಯಕೋಸ್ಕರ ಮಕ್ಕಳ ಫೋಟೋ ಮಾರಾಟಕ್ಕಿಟ್ಟ ಲುಲು ಕುಮಾರ’ ಎಂಬ ಪೋಸ್ಟ್ ಅಂಟಿಸಿರುವುದು ಕಂಡು ಬಂದಿತು. ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಜಿ. ಪ್ರಕಾಶ್ ನೇತೃತ್ವದ ತಂಡ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ಕೊಟ್ಟು ದೂರು ಸಲ್ಲಿಸಿದ್ದಾರೆ.
ರೇವಣ್ಣ ಮುಂದುವರಿದ ಮೊಂಡಾಟ
ಕೆ.ಆರ್.ನಗರ ಟೌನ್ ಠಾಣೆಯ ಅಪಹರಣ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಾಸಕ ಎಚ್.ಡಿ. ರೇವಣ್ಣ, ವಿಶೇಷ ತನಿಖಾ ದಳ(ಎಸ್ಐಟಿ) ಅಧಿಕಾರಿಗಳ ವಿಚಾರಣೆ ವೇಳೆ ಮೊಂಡಾಟ ಮುಂದುವರಿಸಿದ್ದಾರೆ. ಅಪಹರಣಕ್ಕೂ ನನಗೂ ಸಂಬಂಧ ಇಲ್ಲ. ಅನಗತ್ಯವಾಗಿ ರಾಜಕೀಯ ಷಡ್ಯಂತ್ರದಿಂದ ನನ್ನ ಸಿಲುಕಿಸಲಾಗಿದೆ ಎಂದು ರೇವಣ್ಣ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಎಫ್ ಐಆರ್ ಸಾಧ್ಯತೆ
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದ ಸಂತ್ರಸ್ತೆ ಕಡೆಯಿಂದ ದೂರು ಪಡೆದು ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಿಸಲು ಎಸ್ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಪ್ರಕರಣ ದಾಖಲಾದರೆ ಪ್ರಜ್ವಲ್ ರೇವಣ್ಣಗೂ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಮುಖ್ಯಮಂತ್ರಿ, ಡಿಸಿಎಂ ವಿರುದ್ಧ ಪೋಸ್ಟರ್ ಅಂಟಿಸಿರುವುದು ತಿಳಿದು ಬಂದಿದೆ. ಆಯಾ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಿ. ದಯಾನಂದ್-ನಗರ ಪೊಲೀಸ್ ಆಯುಕ್ತ