ನವಲಗುಂದ: ತಾಲೂಕಿನ ಮೊರಬ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿಯೂ ಮುಂಗಾರು ಮಳೆ ಚೆನ್ನಾಗಿ ಬೀಳುವ ಮುನ್ಸೂಚನೆ ಇದೆ. ರೈತರ ಅಗತ್ಯಕ್ಕೆ ತಕ್ಕಂತೆ ಅಣ್ಣಿಗೇರಿ, ಮೊರಬ ಹಾಗೂ ನವಲಗುಂದ ರೈತ ಸಂಪರ್ಕ ಕೇಂದ್ರದಲ್ಲಿ ಬೀತ್ತನೆ ಬೀಜ ಹಾಗೂ ಕೃಷಿ ಇಲಾಖೆ ಕೇಂದ್ರಿಕರಿಸಿದ ಆಗ್ರೋಗಳಲ್ಲಿ ರಾಸಾಯನಿಕ ಗೊಬ್ಬರ ಸಂಗ್ರಹಿಸಲಾಗಿದೆ. ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ದಂಡಗಿ ಮಾತನಾಡಿ, ಮುಂಗಾರು ಬಿತ್ತನೆಗೆ ಬೀಜ ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರೈತರು ಬಿತ್ತನೆ ಬೀಜ ಕೊಳ್ಳಲು ಅಗತ್ಯ ದಾಖಲೆಗಳಾದ ಆಧಾರ ಕಾರ್ಡ್, ಖಾತೆ ಉತಾರ, ಕಂಪ್ಯೂಟರ್ ಉತಾರ ಹಾಗೂ ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿಗಳನ್ನು ಕೃಷಿ ಇಲಾಖೆಗೆ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಬೀಜ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ತಾ.ಪಂ. ಅಧ್ಯಕ್ಷೆ ಅನ್ನಪೂರ್ಣ ಶಿರಹಟ್ಟಿಮಠ, ಗ್ರಾ.ಪಂ. ಅಧ್ಯಕ್ಷೆ ಸುನಂದಾ ಖಗದಾಳ, ಅಡಿವೆಪ್ಪ ಮನಮಿ, ಯೋಗಪ್ಪ ಗೋಲನಾಯ್ಕರ, ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ವಿ.ಬಿ. ಮಠಪತಿ, ಪಿಎಸ್ಐ ಜಯಪಾಲ ಪಾಟೀಲ, ಉಮೇಶ ಹಡಪದ, ಎಸ್.ಸಿ. ಪಾಟೀಲ, ಇದ್ದರು.