ಹೊಸನಗರ: ದೇಶವನ್ನು ಆತಂಕಕ್ಕೆ ದೂಡುತ್ತಿರುವ ಬಿಜೆಪಿ ಮತ್ತು ಬಿಜೆಪಿ ಸಿದ್ಧಾಂತವನ್ನು ಸೋಲಿಸುವುದು ಇಂದಿನ ತುರ್ತು ಅಗತ್ಯ. ಅದಕ್ಕಾಗಿ ನಾವು ಒಂದಾಗಿದ್ದೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮತ್ತಿಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಿಮ್ಮನೆ ರತ್ನಾಕರ್ ಮಾತನಾಡಿ, ದೇಶದಲ್ಲಿ ಜಾತಿ, ಧರ್ಮದ ಒಂದು ಅಂಶದ ಅಜೆಂಡಾ ಹೊತ್ತಿರುವ ಬಿಜೆಪಿ ಚುನಾವಣೆ ಗೆಲ್ಲಲು ಏನು ಬೇಕೋ ಎಲ್ಲವನ್ನೂ ಮಾಡುತ್ತಿದೆ. ದೇಶದಲ್ಲಿ ಎಲ್ಲ ಧರ್ಮ, ಜಾತಿ ಒಂದೇ ಎನ್ನುವ ಸಿದ್ಧಾಂತ ಹೊಂದಿರುವ ಕಾಂಗ್ರೆಸ್ ದೇಶಕ್ಕೆ ಅಗತ್ಯ. ಈ ಒಂದೇ ಕಾರಣಕ್ಕೆ ನಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ ಎಂದರು. ಯುವಕರು ಮಹಾತ್ಮ ಗಾಂಧಿ, ಅಂಬೇಡ್ಕರ್, ನೆಹರು ಅವರ ಬದುಕಿನ ಆಶಯ ತಿಳಿಯಬೇಕಿದೆ. ಬಿಜೆಪಿಯ ಭಾವನಾತ್ಮಕ ಪ್ರಚೋದನೆಗೆ ಒಳಗಾಗಬಾರದು. ತೀರ್ಥಹಳ್ಳಿ ರಾಜಕಾರಣದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ನಾನು ಸಾಲದ ಮೇಲೆ ಸಾಲ ಮಾಡಿಕೊಂಡಿದ್ದೇನೆ. ಗುಮ್ಮಿ ನೀರು ಕುಡಿದವರು ಶ್ರೀಮಂತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಆರ್.ಎಂ.ಮಂಜುನಾಥ್ ಮಾತನಾಡಿ, ಇಲ್ಲಿ ಯಾರ ಪ್ರಭಾವ ಎಷ್ಟು ಎನ್ನುವುದು ಮುಖ್ಯವಲ್ಲ. ಕಾಂಗ್ರೆಸ್ ಗಟ್ಟಿಗೊಳ್ಳಬೇಕಿದೆ. ಬಿಜೆಪಿಯವರು ಗಾಂಧಿ ಭಾವಚಿತ್ರವನ್ನು ಕೈಯಲ್ಲಿಟ್ಟುಕೊಂಡು ಗೋಡ್ಸೆ ಸಿದ್ಧಾಂತವನ್ನು ತೋರುತ್ತಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಲು ಹಳ್ಳಿ ಹಳ್ಳಿಗೂ ಪ್ರವಾಸ ಮಾಡಲಾಗುವುದು ಎಂದರು.