ತುಮಕೂರು: ಮಹಿಳಾ ಮತದಾರರೇ ಹೆಚ್ಚಾಗಿರುವ ತುರುವೇಕೆರೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ರಾಜಕಾರಣಕ್ಕೆ ವೇದಿಕೆ ಸಿದ್ಧವಾಗಿದ್ದು ಬಿಜೆಪಿ, ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಜಾತಿ, ಹಣ, ತೋಳ್ಬಲಕ್ಕೆ ಪ್ರಸಿದ್ಧಿಯಾಗಿರುವ ಕ್ಷೇತ್ರದಲ್ಲೀಗ ಮತ್ತೊಂದು ರಣರಂಗ ಸಜ್ಜಾಗಿದೆ. ಬಿಜೆಪಿಯಿಂದ ಮರು ಆಯ್ಕೆ ಬಯಸಿರುವ ಮಸಾಲಾ ಜಯರಾಂ ಅವರ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯೇ ಸರಿ. ಜೆಡಿಎಸ್ನಿಂದ ಎಂ.ಟಿ.ಕೃಷ್ಣಪ್ಪ ಕಣಕ್ಕಿಳಿಯಲಿದ್ದು, ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಕೆಜೆಪಿ ಸಂದರ್ಭದಲ್ಲಿ ಬಿಎಸ್ವೈ ಪರವಾಗಿದ್ದ ಬಿಜೆಪಿಯ ಮಸಾಲಾ ಜಯರಾಂ 2018ರಲ್ಲಿ ಗೆದ್ದು ಬೀಗಿದ್ದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೂಡ ಕ್ಷೇತ್ರದ ಆಳ, ಅಗಲ ಬಲ್ಲವರಾಗಿದ್ದು, ಗೆಲುವು ಪಡೆಯಲು ಕ್ಷೇತ್ರದಲ್ಲಿ ಇದೇ ಜಾತಿ ಸಮೀಕರಣದ ಸರಳೀಕರಣಕ್ಕೆ ಮುಂದಾಗಿ ವಿವಿಧ ತಂತ್ರ ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಹೇಮಾವತಿ ನೀರು, ಕೊಬ್ಬರಿ ಸೇರಿದಂತೆ ಸ್ಥಳೀಯ ವಿಚಾರ ಬಂದಾಗ ಕ್ಷೇತ್ರದ ಜನರ ಪರವಾಗಿ ಎಂತಹ ಹೋರಾಟಕ್ಕೂ ಸಿದ್ಧವಿರುವ ಎಂ.ಟಿ.ಕೃಷ್ಣಪ್ಪ 2018ರ ನಂತರ ಕಳೆದ 5 ವರ್ಷದಲ್ಲಿ ಕಡಿಮೆ ಮಾತನಾಡಿರುವುದು ಚುನಾವಣೆಯಲ್ಲಿ ಫಲ ನೀಡಬಹುದು.
ಬಿಎಸ್ವೈ ಅಲೆಯಲ್ಲಿ ಗೆದ್ದು ಶಾಸಕರಾದ ಮಸಾಲಾ ಜಯರಾಂಗೆ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಹಾಗೂ ಎಸ್.ಪಿ.ಮುದ್ದಹನುಮೇಗೌಡ ಪಕ್ಷ ಸೇರ್ಪಡೆ ಕೊಂಚ ಅನುಕೂಲ ಮಾಡಬಹುದಾದರೂ ಸ್ಥಳೀಯರ ವಿಶ್ವಾಸವೇ ಫಲಿತಾಂಶ ನಿರ್ಧರಿಸಲಿದೆ. ಕಾಂಗ್ರೆಸ್ನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ಹೆಸರು ಹೆಚ್ಚಾಗಿ ಪ್ರಚಾರದಲ್ಲಿದೆಯಾದರೂ ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ವರಿಷ್ಠರು ಗಂಭೀರ ಚಿಂತನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಟಿಕೆಟ್ಗೆ ಮುಂದುವರಿದ ಪೈಟೋಟಿ: 2008ರಲ್ಲಿ ನಟ ಜಗ್ಗೇಶ್ ಕಾಂಗ್ರೆಸ್ನಿಂದ ಗೆದ್ದು ಕೆಲವೇ ತಿಂಗಳಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ ನಂತರ ನೆಲಕಚ್ಚಿರುವ ಕಾಂಗ್ರೆಸ್ಗೆ ಶಕ್ತಿ ತುಂಬಲು ಸಮರ್ಥರ ಹುಡಕಾಟ ಮುಂದುವರಿದಿದೆ. ಜೆಡಿಎಸ್ ತೊರೆದು ಬಂದಿರುವ ನೆಲಮಂಗಲ ಮೂಲದ ಬಿಎಂಎಲ್ ಕಾಂತರಾಜು ಬಗ್ಗೆ ಜಿಲ್ಲೆಯ ಕೆಲವು ಮುಖಂಡರು ಅಸಮಾಧಾನ ಹೊರಹಾಕಿರುವ ಹಿನ್ನೆಲೆಯಲ್ಲಿ ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಹೆಸರು ಕೂಡ ಈಗ ಮುಂಚೂಣಿಗೆ ಬಂದಿದೆ. ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಪಾವಗಡ, ಶಿರಾ, ತಿಪಟೂರು ಜತೆಗೆ ತುರುವೇಕೆರೆ ಕ್ಷೇತ್ರದ ಬಗ್ಗೆಯೂ ವಿಶೇಷ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಮಾತೃ ಪಕ್ಷಕ್ಕೆ ಎಂಡಿಎಲ್: ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಪಕ್ಷಾಂತರ ಈ ಚುನಾವಣೆಯಲ್ಲಿಯೂ ನಡೆದಿದ್ದು ಮಾತೃಪಕ್ಷ ಬಿಜೆಪಿಗೆ ಸೇರ್ಪಡೆಯಾಗಿ ಶಾಸಕ ಮಸಾಲಾ ಜಯರಾಂ ಪರವಾಗಿ ಪ್ರಚಾರ ನಡೆಸುತ್ತಿರುವುದು ಬಿಜೆಪಿಗೆ ಕೊಂಚಮಟ್ಟಿಗೆ ಅನುಕೂಲವಾಗಬಹುದು. ನಟ ಜಗ್ಗೇಶ್ ರಾಜ್ಯಸಭೆಗೆ ಆಯ್ಕೆಯಾಗಿರುವುದು ಹಾಗೂ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇ ಗೌಡ ಬಿಜೆಪಿ ಸೇರ್ಪಡೆ ಕ್ಷೇತ್ರದಲ್ಲಿ ಹೆಚ್ಚಾಗಿರುವ ಒಕ್ಕಲಿಗ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆಯಾದರೂ ಅಭ್ಯರ್ಥಿಯ ವರ್ಚಸ್ಸು ಮುಖ್ಯವಾಗಿದೆ.
ಎಂ.ಟಿ.ಕೃಷ್ಣಪ್ಪ
ಪ್ಲಸ್ ಮೈನಸ್
ಮಸಾಲಾ ಜಯರಾಂ
+ ಅಭಿವೃದ್ಧಿ ಕಾರ್ಯಗಳು
+ ಲಿಂಗಾಯತ ಮತಬ್ಯಾಂಕ್
+ ಎಂಡಿಎಲ್, ಎಸ್ಪಿಎಂ, ಜೆಸಿಎಂ ಬಲ
– ಆಡಳಿತ ವಿರೋಧಿ ಅಲೆ
– ಪಕ್ಷ ತೊರೆಯುತ್ತಿರುವ ಪ್ರಮುಖ ನಾಯಕರು
– ರಾಜಕೀಯ ತಂತ್ರಗಾರಿಕೆಯಲ್ಲಿ ವಿಫಲ
ಎಂ.ಟಿ.ಕೃಷ್ಣಪ್ಪ
+ ರಾಜಕೀಯ ಪಟ್ಟು ಬಲ್ಲ ಹಿರಿಯ ನಾಯಕ
+ ಒಕ್ಕಲಿಗ ಸಮುದಾಯದ ಬೆಂಬಲ
+ ಕೊನೆಯ ಚುನಾವಣೆ ಅಸ್ತ್ರ
– ಜೆಡಿಎಸ್ನಿಂದ ದೂರವಿರುವ ಲಿಂಗಾಯಿತರು
– ಕೈಕೊಡುತ್ತಿರುವ ರಾಜಕೀಯ ತಂತ್ರಗಾರಿಕೆ
– ಸ್ಥಳೀಯ ನಾಯಕತ್ವದ ಕೊರತೆ
ಜಾತಿವಾರು ಅಂಕಿ-ಅಂಶ
(ಅಂದಾಜು)
ಒಕ್ಕಲಿಗ 75000
ಲಿಂಗಾಯತ 32500
ಪರಿಶಿಷ್ಟ ಜಾತಿ 27500
ಪರಿಶಿಷ್ಟ ಪಂಗಡ 5400
ಮುಸ್ಲಿಂ 11500
ಕಾಡುಗೊಲ್ಲರು 11000
ಕುರುಬರು 8000
ಇತರ 9765
ಪಕ್ಷಗಳ ಸಿದ್ಧತೆ
ಬಿಜೆಪಿ
ಮನೆಮನೆಗೆ ವಿಜಯ ಸಂಕಲ್ಪ ಅಭಿಯಾನ
ಅನ್ಯ ಪಕ್ಷಗಳ ಮುಖಂಡರಿಗೆ ಗಾಳ ಎಂಡಿಎಲ್,
ಎಸ್ಪಿಎಂ ಕ್ಷೇತ್ರ ಪ್ರವಾಸ
ಜೆಡಿಎಸ್
ಅಭ್ಯರ್ಥಿ ಘೋಷಣೆ
ಎಚ್ಡಿಕೆ ನೇತೃತ್ವದ ಪಂಚರತ್ನ ಯಾತ್ರೆ
ಲಿಂಗಾಯತ ಮುಖಂಡರಿಗೆ ಗಾಳ
ಕಾಂಗ್ರೆಸ್
ಭಾರತ್ ಜೋಡೋ ಪಾದಯಾತ್ರೆ
ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ
ಜಿಲ್ಲಾ ಮಟ್ಟದಲ್ಲಿ ಮುಖಂಡರ ಸಭೆ
ಒಟ್ಟು ಮತದಾರರು: 180665
ಪುರುಷರು :90486
ಮಹಿಳೆಯರು: 90176
ಇತರ: 6