ಉಳ್ಳಾಗಡ್ಡಿ-ಖಾನಾಪುರ: 2019ರ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ, ಬೆಳೆಹಾನಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಕಾಟಾಚಾರದ ಪ್ರದಕ್ಷಿಣೆ ಹಾಕಿ ಹೋಗುವುದರಿಂದ ಪ್ರಯೋಜನವಿಲ್ಲ. ಕರೊನಾ, ನೆರೆ ಹಾವಳಿಯಿಂದ ಕಂಗೆಟ್ಟ ಜನರ ಸಹಾಯಕ್ಕೆ ಸರ್ಕಾರ ಬರಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸಮೀಪದ ಚಿಕಾಲಗುಡ್ಡದ ಸರ್ಕಾರಿ ಶಾಲೆಯಲ್ಲಿರುವ ನಿರಾಶ್ರಿತರನ್ನು ಶನಿವಾರ ಕಾಂಗ್ರೆಸ್ ನಿಯೋಗದೊಂದಿಗೆ ಭೇಟಿ ಮಾಡಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯವರನ್ನು ನಮ್ಮ ಜಿಲ್ಲೆಗೆ ಉಸ್ತುವಾರಿಯಾಗಿಸಿದ್ದಾರೆ. ಬಿಜೆಪಿಯವರಿಗೆ ಜವಾಬ್ದಾರಿ ಕಡಿಮೆ ಇದೆ.
ರಾಜಕಾರಣ ಮಾತ್ರ ಹೆಚ್ಚು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಕಳೆದ ಬಾರಿಯೂ ನಿರಾಶ್ರಿತರಿಗೆ ಮನೆಗಳು ಸರಿಯಾಗಿ ಹಂಚಿಕೆಯಾಗಿಲ್ಲ. ಈ ಬಾರಿಯೂ ಅಂಥ ಪ್ರಮಾದಗಳು ನಡೆಯದಂತೆ ಅಧಿಕಾರಿಗಳು ಗಮನಹರಿಸಬೇಕು. ಜನರ ಆಶೋತ್ತರಗಳಿಗೆ ಅನುಗುಣವಾಗಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಲಕ್ಷ್ಮಣರಾವ ಚಿಂಗಳೆ, ಜಿಪಂ ಸದಸ್ಯ ಮಹಾಂತೇಶ ಮಗದುಮ್ಮ, ಕಿರಣ ರಜಪೂತ, ಪ್ರಶಾಂತ ಢಂಗೆ ಪ್ರಭಾಕರ ಅನೂಜಿ, ಭರಮಾ ಭಡಗಾವಿ, ಹುಕ್ಕೇರಿ ತಹಸೀಲ್ದಾರ್ ಡಿ.ಎಚ್.ಹೂಗಾರ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಪಂ ಸದಸ್ಯರು ಇದ್ದರು.