ಯರಗಟ್ಟಿ, ಬೆಳಗಾವಿ: ಬಸ್ಗಳು ಪ್ರಯಾಣಿಕರಿಂದ ತುಂಬಿ ಬರುತ್ತಿರುವುದರಿಂದ ಸತ್ತಿಗೇರಿ ಹಾಗೂ ಯರಗಟ್ಟಿ ಶಾಲಾ ಕಾಲೇಜ್ಗೆ ತೆರಳಲು ತೊಂದರೆಯಾಗುತ್ತಿದೆ. ಆದ್ದರಿಂದ ಇಟ್ನಾಳ ಗ್ರಾಮಕ್ಕೆ ಹೆಚ್ಚುವರಿ ಬಸ್ ಓಡಿಸಲು ಆಗ್ರಹಿಸಿ ಗುರುವಾರ ಒಂದು ಗಂಟೆಗೂ ಹೆಚ್ಚು ಕಾಲ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟಿಸಿ, ಬಸ್ ನಿಲ್ದಾಣದ ನಿಯಂತ್ರಣ ಕೊಠಡಿಗೆ ಮುತ್ತಿಗೆ ಹಾಕಿದರು. ಇಟ್ನಾಳ ಗ್ರಾಮದಿಂದ ಶಾಲಾ ಕಾಲೇಜಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಬರುವ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಬಸ್ನಲ್ಲಿ ಜೋತುಬಿದ್ದು ಶಾಲೆಗೆ ತೆರಳುವ ದುಸ್ಥಿತಿ ಇದೆ. ಇದರಿಂದ ತರಗತಿಗಳಿಗೆ ಹಾಜರಾಗದೇ ಶಿಕ್ಷಣದ ಜತೆಗೆ ಹಾಜರಾತಿ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಅವ್ಯವಸ್ಥೆ ಕುರಿತು ಯರಗಟ್ಟಿ ಡಿಪೋ ಮ್ಯಾನೇಜರ್ ಮತ್ತು ಕಂಟ್ರೊಲರ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಟ್ನಾಳ ಗ್ರಾಮಕ್ಕೆ ಶಾಲಾ ಸಮಯಕ್ಕೆ ಅನುಕೂಲವಾಗುವಂತೆ ಬೆಳಗ್ಗೆ ಹಾಗೂ ಸಂಜೆ ಹೆಚ್ಚುವರಿ ಬಸ್ ಬಿಡಬೇಕು ಎಂದು ಆಗ್ರಹಿಸಿದರು. ಈ ದಿಢೀರ್ ಪ್ರತಿಭಟನೆಯಿಂದ ಕೆಲಕಾಲ ಪ್ರಯಾಣಿಕರು ಪರದಾಡುವಂತಾಯಿತು. ಬಸವರಾಜ ಪೂಜೇರ, ಮಲ್ಲು ಪಾಟೀಲ, ಶಿವುಕುಮಾರ ಕುಸಲಾಪುರ, ಮಂಜು ಪಾಟೀಲ ಇತರರಿದ್ದರು.