ಬಸವಕಲ್ಯಾಣ: ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್ ನಿರ್ಮಾಣಕ್ಕಾಗಿ ಸರ್ಕಾರದಿಂದ 8 ಎಕರೆ ಜಮೀನು ಒದಗಿಸುವ ಮೂಲಕ ಶಿವಾಜಿ ಜಯಂತಿ ಮುನ್ನಾ ದಿನ ಕಲ್ಯಾಣಕ್ಕೆ ಕೊಡುಗೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಯರಂಡಗಿ ಗ್ರಾಮದ ಎಆರ್ಟಿಒ ಕಚೇರಿ ಬಳಿಯ ಜಮೀನು ಒದಗಿಸಿದ್ದರಿಂದ ಸರ್ಕಾರದ ಈ ನಡೆ ಜನರಲ್ಲಿ ಭರವಸೆ ಮೂಡಿಸಿದೆ.
ತಾಲೂಕಿನ ರಾಜೇಶ್ವರ ಹೋಬಳಿ ಯರಂಡಿಗಿ ಗ್ರಾಮದ ವ್ಯಾಪ್ತಿಯ ಸರ್ವೆ ನಂ. 36//ರಲ್ಲಿ 38 ಎಕರೆ ಜಮೀನಿನ ಪೈಕಿ 8 ಎಕರೆ ಜಮೀನು ನಗರಸಭೆ ಉದ್ಯಾನ ನಿರ್ಮಿಸಲು ಷರತ್ತುಗಳೊಂದಿಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆಗಾಗಿ ಕಾಯ್ದಿರಿಸಲು ತಹಸೀಲ್ದಾರ್ ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ಎಸಿ ಅವರು ಸಲ್ಲಿಸಿದ ಪ್ರಸ್ತಾವನೆ ಪರಿಶೀಲಿಸಿ ಉದ್ಯಾನ ನಿರ್ಮಿಸಲು ಕಾಯ್ದಿರಿಸಲು ಪರಿಗಣಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕ್ಷೇತ್ರದಲ್ಲಿ ನಡೆದ ಉಪಚುನಾವಣೆಗೂ ಮುನ್ನ 10 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಿವಾಜಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದರು. ಈ ಕುರಿತು ಶಾಸಕರಾಗಿ ಆಯ್ಕೆಯಾದ ಶರಣು ಸಲಗರ ಅವರು ಜಮೀನು ಮಂಜೂರಿಗಾಗಿ ಪ್ರಯತ್ನಿಸಿದ್ದರು.