ಧಾರವಾಡ: ಜಿಪಂನ ಪ್ರತಿ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿ, ಯೋಜನೆಗಳ ಅನುಷ್ಠಾನ ವರದಿ ನೀಡಬೇಕು. ಕ್ರಿಯಾಯೋಜನೆಯಲ್ಲಿ ಅನುಮೋದಿಸಿದ ಎಲ್ಲ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಲ್ಲ ಇಲಾಖೆ ಅಧಿಕಾರಿಗಳು
ಕಾಮಗಾರಿ ಅನುಷ್ಠಾನಗೊಳಿಸುವಾಗ ಕ್ಷೇತ್ರದ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಹಂಚಿಕೆ ಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಮಾತನಾಡಿ, ನರೇಗಾ ಕಾಮಗಾರಿಗಳಿಗೆ ಆದ್ಯತೆ ನೀಡಿ ಅಂದಾಜು 6 ಲಕ್ಷ ಮಾನವ ದಿನ ಸೃಷ್ಟಿಸಲಾಗಿದೆ. ಇಂಗು ಗುಂಡಿ ನಿರ್ವಣ, ಇತರ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಉಪ ಕಾರ್ಯದರ್ಶಿ ಎಸ್.ಎಂ. ಕುಂದೂರ ಸಭೆ ನಿರ್ವಹಿಸಿದರು. ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರಮಠ ಸ್ವಾಗತಿಸಿದರು. ಮುಖ್ಯಯೋಜನಾಧಿಕಾರಿ ದೀಪಕ ಮಡಿವಾಳರ, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಆಕ್ಷೇಪದ ಮಧ್ಯೆ ಅನುಮೋದನೆ
ಪಿಆರ್ಇಡಿ ಇಂಜಿನಿಯರ್ ಮನೋಹರ ಮಂಡೋಲಿ, ಹೊಸ ಕಾಮಗಾರಿಗಳ ಅನುಮೋದನೆಗೆ ಅನುಮತಿ ಕೇಳಿದಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂದಾಜು 7 ಕೋಟಿ ರೂ. ಅನುದಾನ ವಾಪಸ್ ಹೋಗಿರುವುದಕ್ಕೆ ಚನ್ನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ, ಇತರರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ, ಗುತ್ತಿಗೆದಾರರಿಗೆ 10 ದಿನದಲ್ಲಿ ಹಣ ಸಂದಾಯ, ಅನುದಾನ ಉಳಿದರೆ ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವಕ್ಕೆ ಒಪ್ಪಿ ಅನುಮೋದನೆ ನೀಡಿದರು.
ವಿಜೇತರಿಗೆ ಬಹುಮಾನ
ಜಿಪಂ, ಶಿಕ್ಷಣ ಇಲಾಖೆಯಿಂದ ಸ್ವಚ್ಛ ಭಾರತ ಮಿಷನ್ ಹಾಗೂ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛೋತ್ಸವ- ನಿತ್ಯೋತ್ಸವ ಕಾರ್ಯಕ್ರಮದಡಿ ‘ಘನತ್ಯಾಜ್ಯ ನಿರ್ವಹಣೆ’ ಕುರಿತು ಪ್ರೌಢಶಾಲಾ ಮಕ್ಕಳಿಗಾಗಿ ಆನ್ಲೈನ್ನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಧಾರವಾಡ ತಾಲೂಕು ವೀರಾಪುರ ಸರ್ಕಾರಿ ಪ್ರೌಢಶಾಲೆಯ ನಂದೀಶ ಮುರಗೋಡ ಪ್ರಥಮ, ಕಲಘಟಗಿಯ ತುಮರಿಕೊಪ್ಪ ಸೇಂಟ್ ಝೇವಿಯರ್ ಪ್ರೌಢಶಾಲೆಯ ಅಕ್ಷತಾ ಉದೋಜಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ನವಲಗುಂದ ತಾಲೂಕಿನ ಮೊರಬ ಗ್ರಾಮದ ವೈ.ವಿ.ಎಂ. ಪ್ರೌಢಶಾಲೆಯ ಮಧುಮತಿ ಸುತಗಟ್ಟಿಗೆ ಪ್ರಮಾಣಪತ್ರ ಹಾಗೂ ಕ್ರಮವಾಗಿ 3000, 2000, 1000 ರೂ. ನಗದು ಬಹುಮಾನವನ್ನು ಸಭೆಯಲ್ಲಿ ಪ್ರದಾನ ಮಾಡಲಾಯಿತು.