ಶಿಡ್ಲಘಟ್ಟ : ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ, ಪ್ರವಾಸ ಮಾಡಿ, ಆ ಮೂಲಕ ಜ್ಞಾನ ಸಂಪಾದಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ತಾಲೂಕಿನ 8ನೇ ತರಗತಿಯ ಒಟ್ಟು 129 ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸವನ್ನು ಒಂದು ಅಧ್ಯಯನವನ್ನಾಗಿ ಪರಿಗಣಿಸಿ, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಸಂಗ್ರಹಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಕರ್ನಾಟಕದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶವನ್ನು ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದ್ದು ವಿದ್ಯಾರ್ಥಿಗಳು ಪ್ರವಾಸದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗ, ಚಂದವಳ್ಳಿಯ ತೋಟ, ಶಿವಮೊಗ್ಗ, ಜೋಗ್ ಫಾಲ್ಸ್, ಗೋಕರ್ಣ, ಬೀಚ್, ಕೊಲ್ಲೂರು, ಶೃಂಗೇರಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಆದಿಚುಂಚನಗಿರಿ, ಎಡೆಯೂರು ಸೇರಿ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ 129 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಮಾರ್ಗದರ್ಶಿ ಶಿಕ್ಷಕರಾದ ರುದ್ರೇಶಮೂರ್ತಿ, ಸಾದಿಕ್ ಪಾಷ, ಪ್ರಭಾಕರ್, ನಾಗಭೂಷಣ್, ಸುಶೀಲಮ್ಮ, ಸುಜಾತಮ್ಮ, ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ಮಹೇಶ್ವರಪ್ಪ, ಸಿ.ಎಂ.ಮುನಿರಾಜು, ಗಜೇಂದ್ರ, ಮಂಜುನಾಥ್, ಪ್ರಕಾಶ್, ಎಲ್.ವಿ.ವೆಂಕಟರೆಡ್ಡಿ ಇತರರಿದ್ದರು.