ವಿಜಯಪುರ: ಪ್ರಧಾನ ಮಂತ್ರಿ ಜನೌಷಧ ಕೇಂದ್ರವನ್ನು ಹಳ್ಳಿಹಳ್ಳಿಗಳಿಗೆ ತೆಗೆದುಕೊಂಡು ಹೋಗಲು ಚಿಂತನೆ ನಡೆದಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.
ಇಲ್ಲಿನ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ 67ನೇ
ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಸಹಕಾರ ಸಪ್ತಾಹ ದಿನಾಚರಣೆ ಹಾಗೂ ಸಪ್ತಾಹದ ಸಮಾರೋಪ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.
ಕರೊನಾ ಸಂದರ್ಭ ಜನೌಷಧ ಕೇಂದ್ರಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಇನ್ನೂ 600 ಜನೌಷಧ ಕೇಂದ್ರ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಆದರೆ ಸಹಕಾರ ಕ್ಷೇತ್ರದಿಂದ ಹಳ್ಳಿ ಹಳ್ಳಿಗಳಿಗೆ ಜನೌಷಧ ಕೇಂದ್ರ ತೆಗೆದುಕೊಂಡು ಹೋಗಲು ಚಿಂತನೆ ನಡೆದಿದೆ ಎಂದು ಸಚಿವರು ತಿಳಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈವರೆಗೆ ಸಹಕಾರಿ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು ಇನ್ನುಂದೆ ಸಣ್ಣ ಸಿದ್ದರಾಮೇಗೌಡ ಪಾಟೀಲರ ಹೆಸರಿನಲ್ಲಿ ಹತ್ತು ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಕರೊನಾ ಹಿನ್ನೆಲೆ ರಾಜ್ಯದ ನಾಲ್ಕು ಸಹಕಾರಿ ವಿಭಾಗದಿಂದ ಆರ್ಥಿಕ ಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಎಲ್ಲ ಸಂಘ ಸಂಸ್ಥೆಗಳಿಂದ ವಿಶೇಷ ಸಾಲ ಸೌಲಭ್ಯ ನೀಡಲಾಗಿದೆ.
ಕೇಂದ್ರ ಸರ್ಕಾರ ಆತ್ಮ ನಿರ್ಭರ ಯೋಜನೆಯಡಿ
20 ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದು ಆ ಪೈಕಿ 4750 ಕೋಟಿ ರೂ. ಸಹಕಾರಿ ಇಲಾಖೆಗೆ ನೀಡಿದೆ ಎಂದರು.
ರಾಜ್ಯ ಸರ್ಕಾರ ಎಲ್ಲ ಸಹಕಾರಿಗಳ ಮೂಲಕ 1200 ಕೋಟಿ ರೂ. ಸಾಲ ನೀಡುವುದಾಗಿ ಘೋಷಿಸಿದ್ದು ಆ ಪೈಕಿ 600 ಕೋಟಿ ರೂ. ಸಾಲ ನೀಡುವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಸಿ. ಮನಗೂಳಿ, ಶಶಿಕಾಂತಗೌಡ ಪಾಟೀಲ, ಸಾಂಬಾಜಿ ಮಿಸಾಳೆ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮೀನಾಕ್ಷಿ ಆರ್. ಕಲ್ಲೂರ ಮತ್ತಿತರರಿದ್ದರು.