More

    ಪೊಲೀಸ್ ಸಿಬ್ಬಂದಿಗೆ ಆಯುಷ್ ಔಷಧ

    ಧಾರವಾಡ: ಕರೊನಾ ವೈರಸ್ ತಡೆಗಟ್ಟಲು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ರೋಗ ನಿರೋಧಕ ಹಾಗೂ ವೈರಾಣು ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.

    ಎಸ್ಪಿ ಕಚೇರಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಆಯುಷ್ ವೈದ್ಯರು ಮಂಗಳವಾರ ನೀಡಿರುವ ಆಯುರ್ವೆದಿಕ್ ಚಮನಪ್ರಾಶ ಮತ್ತು ಹೋಮಿಯೋಪತಿಯ ಅರ್ಸಾನಿಕ್ ಆಲ್ಬಂ ಮಾತ್ರೆಗಳನ್ನು ಪೊಲೀಸ್ ಸಿಬ್ಬಂದಿಗೆ ವಿತರಿಸಿ ಅವರು ಮಾತನಾಡಿದರು.

    ಪೊಲೀಸ್ ಇಲಾಖೆಯ 753ಕ್ಕೂ ಹೆಚ್ಚು ಸಿಬ್ಬಂದಿ ಚೆಕ್​ಪೋಸ್ಟ್ ಸೇರಿ ವಿವಿಧೆಡೆ ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಪರೀಕ್ಷೆಯೊಂದಿಗೆ ಅವರಲ್ಲಿ ರೋಗ ನಿರೋಧಕ ಮತ್ತು ವೈರಾಣು ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಔಷಧ ನೀಡಲಾಗುತ್ತಿದೆ. ಇದು ಪರಿಣಾಮಕಾರಿ ಔಷಧವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ, ಹೋಂ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳಿಗೂ ಆಯುಷ್ ಔಷಧ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ ಮಾತನಾಡಿ, ಸೋಂಕು ತಡೆಯಲು ಆರಂಭದಿಂದಲೂ ಆಯುಷ್ ಇಲಾಖೆ, ಜಿಲ್ಲೆಯ ಆಯುಷ್ ವೈದ್ಯರು, ಹೋಮಿಯೋಪತಿ ಹಾಗೂ ಆಯುರ್ವೆದ ಕಾಲೇಜ್​ಗಳು ಜಿಲ್ಲಾಡಳಿತದೊಂದಿಗೆ ಶ್ರಮಿಸುತ್ತಿವೆ. ನಗರದ ಬಿ.ಡಿ. ಜತ್ತಿ ಹಾಗೂ ಸತ್ತೂರಿನ ಸತ್ಯಸಾಯಿ ಹೋಮಿಯೋಪತಿ ಮೆಡಿಕಲ್ ಕಾಲೇಜ್​ನಿಂದ ಆಯುರ್ವೆದಿಕ್ ಔಷಧಿಯನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದರು.

    ಎಲ್ಲ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ 70ಕ್ಕೂ ಹೆಚ್ಚು ಖಾಸಗಿ ಆಯುಷ್ ವೈದ್ಯರು ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ, ಸಂಜೀವಿನಿ ಮೆಡಿಕಲ್ ಕಾಲೇಜು ಹಾಗೂ ಧಾರವಾಡದ ಬಿ.ಡಿ. ಜತ್ತಿ ಹೋಮಿಯೋಪತಿ ಮೆಡಿಕಲ್ ಕಾಲೇಜ್​ಗಳು ಕೋವಿಡ್ ಕೇರ್ ಸೆಂಟರ್​ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ 1033 ಆಶಾ ಕಾರ್ಯಕರ್ತೆಯರು ಸೇರಿ ಎಲ್ಲ ಹಂತದ ಆರೋಗ್ಯ ಸಿಬ್ಬಂದಿ, ಅಧಿಕಾರಿಗಳಿಗೆ ಔಷಧವನ್ನು ಆಯುಷ್ ಇಲಾಖೆಯಿಂದ ನೀಡಲಾಗುವುದು ಎಂದರು.

    ಡಿವೈಎಸ್​ಪಿ ರವಿ ನಾಯ್ಕ ಮಾತನಾಡಿದರು. ಸಿಸಿಐಎಂ ಸದಸ್ಯ ಡಾ. ಶ್ರೀನಿವಾಸ ಬನ್ನಿಗೋಳ, ಎಎಫ್​ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ, ಡಾ. ಅಮಿತ್ ಎಂ.ಎಸ್., ಎಎಫ್​ಐ ಜಿಲ್ಲಾಧ್ಯಕ್ಷ ಡಾ. ವೈ. ರವೀಂದ್ರ, ಡಾ. ತ್ಯಾಗರಾಜ, ಡಾ. ಕಿರಣಕುಮಾರ ಗಡ್ಡಿ, ಪ್ರಶಾಂತ ಕುಬಸದ, ಡಾ.ಕೌಸರ ಆಮಾದಾರ, ಆಯುಷ್ ಕಾಲೇಜ್ ಪ್ರಾಚಾರ್ಯರಾದ ಡಾ.ಎ.ಎಸ್. ಪ್ರಶಾಂತ, ಡಾ. ಎಚ್.ಟಿ. ಹೊಂಬಳ, ಡಾ. ಕಿರಣ ಸಾಣಿಕೊಪ್ಪ, ಆಯುಷ್ ನೋಡಲ್ ಅಧಿಕಾರಿ ಡಾ.ಬಿ.ಪಿ. ಪೂಜಾರಿ, ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts