ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಪೌರಕಾರ್ಮಿಕರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು.
ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ನಗರದ ಜಿಲ್ಲಾಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 236 ಗ್ರಾಪಂಗಳಲ್ಲಿ 1,302 ಪೌರಕಾರ್ಮಿಕರಿದ್ದು, ಅವರಲ್ಲಿ 89 ಕಾಯಂ ಪೌರಕಾರ್ಮಿಕರಿದ್ದಾರೆ. ಆದರೆ, ಕೆಲಸದ ಭದ್ರತೆ ಇಲ್ಲ. ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ಎಲ್ಲ ಸ್ವಚ್ಛತಾ ಪೌರಕಾರ್ಮಿಕರನ್ನು ಕಾಯಂ ಮಾಡಿ ಸರ್ಕಾರಿ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಬೇಕು. ಈಗಾಗಲೇ ವಾಸ ಇರುವ ನಿವೇಶನಗಳಿಗೆ ಹಕ್ಕುಪತ್ರ, ಸ್ವಾಧೀನ ಪತ್ರಗಳನ್ನು ನೀಡಬೇಕು. ಇಎಸ್ಐ, ಪಿಎಫ್ ಸೌಲಭ್ಯ ನೀಡಬೇಕು. ನಿವೃತ್ತ ಉಪಧನ, ಮರಣ ಉಪಧನ ನೀಡುವಲ್ಲಿ ವಿಳಂಬ ಮಾಡುತ್ತಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ತುಟ್ಟಿಭತ್ಯೆ, ಬಾಕಿ ವೇತನ, ಆರೋಗ್ಯ ಕಾರ್ಡ್ ನೀಡಬೇಕು. ಸೇವಾ ನಿಯಮಗಳನ್ನು ತೆರೆಯಬೇಕು. ವಿದ್ಯಾರ್ಹತೆಗೆ ಅನುಗುಣವಾಗಿ ಬಡ್ತಿ ನೀಡಿ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಹರಿಹರ ಆನಂದಸ್ವಾಮಿ, ಡಾ.ಆಲಗೂಡು ಚಂದ್ರಶೇಖರ್, ಮನೋಜ್ಕುಮಾರ್, ಮಂಜು, ಮೌರ್ಯ, ಪರಮೇಶ್ವರ, ರಾಮಕೃಷ್ಣ, ಸೋಮ, ನಟರಾಜು, ಶ್ರೀನಿವಾಸ್ ಇತರರು ಪ್ರತಿಭಟನೆಯಲ್ಲಿದ್ದರು.