ಬೆಳಗಾವಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ಸಾಯಂಕಾಲ ದಾಳಿ ನಡೆಸಿದ್ದು, ಪಿಎಸ್ಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಪಿಎಸ್ಐ ಕುಮಾರ ಹಿತ್ತಲಮನಿ ಹಾಗೂ ಕಾನ್ಸ್ಟೇಬಲ್ಗಳಾದ ಮಾಯಪ್ಪ ಗಡ್ಡೆ ಹಾಗೂ ಶ್ರೀಶೈಲ ಮಂಗಿ ಬಂಧಿತರು.
ಸದಲಗಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿರುವ ಬೋರಗಾಂವ ಗ್ರಾಮದಲ್ಲಿ ಅಧಿಕೃತ ಪರವಾನಗಿ ಪಡೆದು ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದರೂ ಅನಧಿಕೃತವಾಗಿ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಇಚಲಕರಂಜಿ ಮೂಲದ ಮಾಲೀಕ ರಾಜು ಪಾಶ್ಚಾಪುರೆ ಅವರಿಗೆ ಬೆದರಿಕೆ ಹಾಕಿ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ರಾಜು ಅವರು ಎಸಿಬಿಗೆ ತಿಳಿಸಿದ್ದರು. ಗುರುವಾರ ಸಾಯಂಕಾಲ ಠಾಣೆಗೆ ತೆರಳಿ 40 ಸಾವಿರ ರೂ. ಲಂಚ ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪಿಎಎಸ್ಐ ಕುಮಾರ ಹಿತ್ತಲಮನಿ ಹಾಗೂ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಎಸ್ಪಿ ಬಿ.ಎಸ್. ನ್ಯಾಮಗೌಡರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಎಂ. ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಎಚ್.ಸುನೀಲಕುಮಾರ, ಎ.ಎಎಸ್. ಗುದಿಗೊಪ್ಪ, ಧಾರವಾಡದ ಅಲಿ ಶೇಖ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.