ಚಿತ್ರದುರ್ಗ: ಪ್ರಧಾನಿ ನರೇಂದ್ರಮೋದಿ ಅವರ ಹೆಸರು ಪ್ರಸ್ತಾಪಿಸದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಂಜುನಾಥ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಭಾರತವನ್ನು ವಿಶ್ವ ಗುರು ಸ್ಥಾನಕ್ಕೆ ಕೊಂಡೊಯುತ್ತಿರುವ ಪ್ರಧಾನಿ ವಿರುದ್ಧ ಅವಹೇಳನವಾಗಿ ಮಾತಾಡಿರುವುದು ಸರಿಯಲ್ಲ. ಅವರ ಈ ಹೇಳಿಕೆ ಕಾಂಗ್ರೆಸ್ನ ಸಂಸ್ಕೃತಿ ಮತ್ತು ಸಂಸ್ಕಾರ ತೋರಿಸುತ್ತಿದೆ. ಭಾಗವಹಿಸುವ ಕಾರ್ಯಕ್ರಮಗಳಲ್ಲಿ ೇರಾವ್ ಹಾಕುತ್ತೇವೆ ಎಂದು ಕಿಡಿಕಾರಿದರು.
ನಾಲಿಗೆ ಹರಿಬಿಟ್ಟಿದ್ದು, ಯಾವ ರೀತಿ ಮಾತನಾಡಬೇಕೆಂದು ಪಾಠ ಹೇಳಿಕೊಡಲು ಬಿಜೆಪಿಗರು ಸಿದ್ಧರಿದ್ದೇವೆ. ಬಹಿರಂಗ ಕ್ಷಮೆಯಾಚಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಜಿ.ಎಚ್.ಮೋಹನ್ ಮಾತನಾಡಿ, ಪ್ರಧಾನಿ ಹುದ್ದೆ ದೇಶದ ಪ್ರತಿಯೊಬ್ಬರೂ ಗೌರವಿಸಬೇಕು. ಆದರೆ, ಈಚೆಗೆ ಹಿರಿಯೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಂಜುನಾಥ್ ಅವಾಚ್ಯ ಪದ ಬಳಸಿ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ. ಕೂಡಲೇ ಅವರನ್ನು ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಅವರನ್ನು ಅಪಮಾನಿಸಲೆಂದೆ ಈ ರೀತಿ ಹೇಳಿಕೆ ನೀಡಿದ್ದು, ದೇಶ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾದಂತೆ ಕಾಣುತ್ತಿದೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.
ಮುಖಂಡರಾದ ನರೇಂದ್ರ ಹೊನ್ನಾಳ್, ಕರಿಕೆರೆ ತಿಪ್ಪೇಸ್ವಾಮಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ಪರುಶರಾಂ, ಪಾಂಡು, ಸಿದ್ಧಾರ್ಥ್, ಚಂದ್ರು, ಪ್ರಶಾಂತ್, ಕಿರಣ್, ಬಸಮ್ಮ, ಎನ್.ವೀಣಾ, ಹಳಿಯೂರು ತಿಪ್ಪೇಸ್ವಾಮಿ ಇತರರಿದ್ದರು.