ದಾವಣಗೆರೆ: ಡಿಆರ್ಆರ್ ಸರ್ಕಾರಿ ಪಾಲಿಟೆಕ್ನಿಕ್ ಆವರಣದ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರಿಸುವುದನ್ನು ವಿರೋಧಿಸಿ ಡಿಆರ್ಆರ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಡಿಆರ್ಆರ್ ಪಾಲಿಟೆಕ್ನಿಕ್ ಸಂಸ್ಥೆಯ 3 ಎಕರೆ ಜಮೀನನ್ನು ಸರ್ಕಾರಿ ಕಾಲೇಜಿಗೆ ನೀಡಬೇಕೆಂದು ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಪಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ನೀಡಿದ ಚಕ್ಬಂದಿ ಆಧಾರದ ಮೇಲೆ ಈ ತೀರ್ಮಾನ ಮಾಡಿದ್ದು ಸರಿಯಲ್ಲ ಎಂದು ವಿದ್ಯಾರ್ಥಿಗಳ ಸಂಘದ ಮುಖಂಡರು ಕಿಡಿ ಕಾರಿದರು
ಸರ್ಕಾರ ಆದೇಶ ನೀಡಿದ ಜಾಗದಲ್ಲಿ ಡಿಆರ್ಆರ್ ಪಾಲಿಟೆಕ್ನಿಕ್ಗೆ ಸಂಬಂಧಿಸಿದ ಮೆಕ್ಯಾನಿಕಲ್ ವರ್ಕ್ಶಾಪ್, ಮಹಿಳಾ ವಿದ್ಯಾರ್ಥಿನಿಲಯ ಹಾಗೂ ಆಟದ ಮೈದಾನ ಇದೆ. ಪಾಲಿಟೆಕ್ನಿಕ್ ಪ್ರಾಚಾರ್ಯರ ಗಮನಕ್ಕೆ ಬಾರದಂತೆ ಅತಿಕ್ರಮಣ ಮಾಡಿ ಈ ಮೈದಾನದಲ್ಲಿ ಕಟ್ಟಡ ನಿರ್ಮಿಸುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಸಂಬಂಧಿಸಿದ ಇಲಾಖಾಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರಥಮ ದರ್ಜೆ ಕಾಲೇಜಿನವರಿಗೆ ಬೇರೆಡೆ ಜಾಗ ನೀಡಬೇಕು. ಇಲ್ಲವಾದರೆ ಮುಷ್ಕರ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಮುಖಂಡರಾದ ಕುರುಬರಹಳ್ಳಿ ನಿಂಗರಾಜ್, ವಿ.ಎಂ.ಸಚಿನ್, ಮಹಾಂತೇಶ್, ಸುಮಂತ್, ಪ್ರಸಾದ್, ಗೌರಿ, ದಿವ್ಯಾ, ಸ್ವಪ್ನಾ, ವಾಣಿ, ಚಿನ್ಮಯ್, ಸನತ್, ವರುಣ್, ದೀಕ್ಷಿತ್ ಸೇರಿ ಮೆಕ್ಯಾನಿಕಲ್, ಸಿವಿಲ್, ಸಿಪಿಕೆ, ಸಿಪಿಇ, ಇ ಆ್ಯಂಡ್ ಇ, ಇಸಿ, ಸಿಎಸ್ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.