ಕುರುಗೋಡು: ಶ್ರೀ ದೊಡ್ಡಬಸವೇಶ್ವರ ರಥೋತ್ಸವ ದಿನವಾದ ಮಂಗಳವಾರ ಶಿವಶರಣೆ ನೀಲಮ್ಮ ತಾಯಿಯ ಪಲ್ಲಕ್ಕಿ ಉತ್ಸವ ತರುವಾಗ ಪಲ್ಲಕ್ಕಿ ಮುಂಭಾಗದಲ್ಲಿ ಶಾಸಕ ಜೆ.ಎನ್.ಗಣೇಶ ಅವರ ಫೋಟೋ ಇರುವ ಫಲಕಗಳನ್ನು ಹಿಡಿದು ಅವರ ಅಭಿಮಾನಿಗಳು ಪಾಲ್ಗೊಂಡಿದ್ದರಿಂದ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅನೇಕ ವರ್ಷಗಳಿಂದ ರಾಜಕೀಯ ಸೋಂಕು ಇಲ್ಲದೇ ನಡೆದುಕೊಂಡು ಬರುತ್ತಿದ್ದ ಉತ್ಸವಕ್ಕೆ ಈ ಬಾರಿ ರಾಜಕೀಯ ಸ್ಪರ್ಶವಾಗಿದ್ದು, ದೇಗುಲದ ಇತಿಹಾಸ ಮತ್ತು ಸಂಪ್ರದಾಯಕ್ಕೆ ಶಾಸಕರ ಬೆಂಬಲಿಗರು ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆಗಳು ವ್ಯಕ್ತವಾಗಿದ್ದು, ಶಾಸಕರು ಮತ್ತವರ ಬೆಂಬಲಿಗರನ್ನು ಹಿಗ್ಗಾ-ಮುಗ್ಗಾ ಝಾಡಿಸಿದ ಪೋಸ್ಟರ್ಗಳು ವೈರಲ್ ಆಗಿವೆ. ಜೆ.ಎನ್.ಗಣೇಶ ಭಾವಚಿತ್ರದ ಜತೆ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನೂ ಬಳಸಿ, ಅವರ ಹೆಸರಿಗೂ ಮಸಿ ಬಳಿಯಯಾಗಿದೆ ಎಂದು ನೋವು ತೋಡಿಕೊಳ್ಳಲಾಗಿದೆ.