ಕಾರವಾರ: ಜಮೀನಿನ ಮಾಲೀಕರಿಗೆ ಪರಿಹಾರ ನೀಡದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಅಮದಳ್ಳಿಯಲ್ಲಿ ಆಸ್ತಿಗಳ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಶುಕ್ರವಾರ ಜೆಸಿಬಿ ಜತೆ ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ವಾಗ್ವಾದ, ಮಾತಿನ ಚಕಮಕಿಯ ನಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ ಮುಕ್ತಾಯವಾಗಿದೆ ಎಂದು ಈಗಾಗಲೇ ಅದರ ಉದ್ಘಾಟನೆಯ ನೆರವೇರಿದೆ, ಆದರೆ, ಅಮದಳ್ಳಿಯಲ್ಲಿ ಇನ್ನೂ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಜಮೀನಿನ ಮಾಲೀಕರಿಗೆ ಸಂಪೂರ್ಣ ಪರಿಹಾರವನ್ನೇ ನೀಡದೇ ಅಧಿಕಾರಿಗಳು ಆಸ್ತಿ ತೆರವಿಗೆ ಮುಂದಾಗಿದ್ದಾರೆ. ಜಮೀನಿನ ಗಡಿ ಗುರುತಿಸದೇ ಹೆಚ್ಚುವರಿ ಭೂಮಿಯನ್ನೂ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಯಾವುದೋ ಜಮೀನಿನ ಸ್ವಾಧೀನಕ್ಕೆ ಅವಾರ್ಡ್ ಆಗಿದ್ದರೆ ಬೇರೆ ಜಮೀನಿನ ಮರ, ಗಿಡಗಳನ್ನು ಕಡಿದಿದ್ದಾರೆ. ಎಂದು ಅಮದಳ್ಳಿಯ ಕೆಲ ಭೂ ಮಾಲೀಕರು ಅಸಮಾಧಾನ ಹೊರ ಹಾಕಿದರು. ತಹಸೀಲ್ದಾರ್ ರಾಮಚಂದ್ರ ಕಟ್ಟಿ, ಸಿಪಿಐ ಸಂತೋಷ ಶೆಟ್ಟಿ ಸ್ಥಳಕ್ಕೆ ತೆರಳಿ ಜನರ ಅಹವಾಲು ಆಲಿಸಿದರು. ಸರಿಯಾಗಿ ಗಡಿ ಗುರುತಿಸಿ, ಪರಿಹಾರ ವಿತರಣೆಯಾದ ಬಳಿಕವೇ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದರು.