ಬೀದರ್: ವಿಶ್ವ ಪರಿಸರ ದಿನ ನಿಮಿತ್ತ ಶುಕ್ರವಾರ ವಿವಿಧೆಡೆ ನಾನಾ ಕಾರ್ಯಕ್ರಮ ನಡೆದವು. ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿ ಜಿಲ್ಲಾಡಳಿತ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಜರುಗಿದವು. ಅಲ್ಲಲ್ಲಿ ಸಸಿ ನೆಡುವ, ಕೆರೆ ಮತ್ತು ಪ್ರವಾಸಿ ತಾಣಗಳ ಸ್ವಚ್ಛತೆ, ಪ್ರತಿಜ್ಞಾ ವಿಧಿ ಸ್ವೀಕಾರ ಇತರ ಚಟುವಟಿಕೆ ಜತೆಗೆ ಪರಿಸರ ರಕ್ಷಣೆ ಸಂಬಂಧ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸಸಿ ನೆಟ್ಟು ಮಾತನಾಡಿ, ಪರಿಸರ ಕಾಪಾಡುವುದೆಂದರೆ ನಮ್ಮ ಜೀವವನ್ನೇ ರಕ್ಷಣೆ ಮಾಡಿಕೊಂಡಂತೆ. ಪರಿಸರ ನಮ್ಮೆಲ್ಲರ ಜೀವನ ಜ್ಯೋತಿಯಾಗಿದೆ. ಪರಿಸರದ ಮಹತ್ವದ ಪ್ರತಿಯೊಬ್ಬರೂ ಅರಿಯಬೇಕು. ಮಕ್ಕಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್.ನಾಗೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸರ್ಕಾರಿ ಐಟಿಐ ಪ್ರಾಚಾರ್ಯ ಶಿವಶಂಕರ ಟೋಕರೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಮೈನುದ್ದೀನ್, ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಮೋರೆ, ಉಪವಲಯ ಅರಣ್ಯಾಧಿಕಾರಿ ಸುರೇಶ, ಅರಣ್ಯ ರಕ್ಷಕರಾದ ಶ್ರೀಶೈಲ, ಶಾಂತಕುಮಾರ, ದಸ್ತಗೀರ, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನೌನಾಥ ಇದ್ದರು.
ಕರ್ನಾಟಕ ಕಾಲೇಜು: ನಗರದ ಕರ್ನಾಟಕ ಪಿಯು ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಟಿಸಿಎಸ್ ಕಂಪನಿ ತಾಂತ್ರಿಕ ಅಧಿಕಾರಿ ರೋಹಿತ್ ಬಿರಾದಾರ ಮಾತನಾಡಿದರು. ಸೇವಾ ಯೋಜನಾಧಿಕಾರಿ ಸಚಿನ್ ವಿಶ್ವಕರ್ಮ, ಪ್ರೊ.ಗಣೇಶ ಥೋರೆ ಪರಿಸರದ ಮಹತ್ವ ತಿಳಿಸಿದರು. ಎಂ.ಎಲ್. ರಾಸೂರ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ ಬೀರಗಿ, ಶಿವಶಂಕರ ಸ್ವಾಮಿ, ವೀರಶೆಟ್ಟಿ ಪಾಟೀಲ್ ಇದ್ದರು.
ರಾಘವೇಂದ್ರ ಕಾಲನಿ: ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದಿಂದ ರಾಘವೇಂದ್ರ ಕಾಲನಿಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ಸಸಿ ನೆಟ್ಟು ಮಾತನಾಡಿ, ಮನೆ ಆವರಣದಲ್ಲಿ ಹೆಚ್ಚಿನ ಸಸಿ ನೆಟ್ಟು ಪಾಲನೆ, ಪೋಷಣೆ ಮಾಡಬೇಕು ಎಂದರು. ಪಶು ವಿವಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಮಾತನಾಡಿದರು. ಓಂಕಾರ ಪಾಟೀಲ್, ಬಸವೇಶ್ವರ ಬಳತೆ ಇದ್ದರು.