ಶಿರಸಿ: ಭಗವದ್ಗೀತೆಯ ಮೂಲಕ ನಾಡಿನ ಉದ್ದಗಲ ಅಭಿಯಾನ ನಡೆಸುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆರು ಲಕ್ಷ ತುಳಸಿಯಿಂದ ಅರ್ಚನೆ ನಡೆಸಿದರು.
ಕಿಸಲವಾಡ, ಕರೂರು, ಸೋಂದಾ ಕಸಬ, ಭರತನಳ್ಳಿ, ತೋಟದ ಹಾಗೂ ಮತ್ತಿತರ ಸೀಮೆಗಳಿಂದ ತರಿಸಲಾಗಿದ್ದ ತುಳಸಿಯನ್ನು ಎರಡನೂರಾ ಮೂವತ್ತಕ್ಕೂ ಅಧಿಕ ವೈದಿಕರು ಗಡೀಕೈ ಕೇಶವ ಹೆಗಡೆ ಯಜಮಾನತ್ವದಲ್ಲಿ ದೇವರಿಗೆ ಸಮರ್ಪಿಸಿದರು.
ಶ್ರೀಗಳು ಆಶೀರ್ವಚನ ನುಡಿದು, ಶ್ರೀಕೃಷ್ಣನ ಜನ್ಮಾಷ್ಠಮಿ ದೇಶದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆ ನಡೆಯುತ್ತಿದೆ. ಅವನ ಪೂಜೆ ಬಿಟ್ಟರೆ ಹೆಚ್ಚು ನಡೆಯುವುದು ಅವನ ನಾಮ ಕೀರ್ತನೆ. ಇಂದು ಆರು ಲಕ್ಷ ತುಳಸಿ ದಳದಿಂದ ಅರ್ಚನೆ ನಡೆದಿದೆ. ನಾಮ ಕೀರ್ತನೆಯ ಪರ್ವ ಕಾಲ ಶ್ರೀಕೃಷ್ಣನ ಜನ್ಮೋತ್ಸವ ಎಂದರು.
ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತೀಯ ಸೇನೆ ಹಾಗೂ ರಾಷ್ಟ್ರದ ಕ್ಷೇಮ ಮತ್ತು ಅಭ್ಯುದಯದ ಸಂಕಲ್ಪದೊಂದಿಗೆ ಶ್ರೀಗಳವರ ಅಪೇಕ್ಷೆ ಮತ್ತು ಅನುಜ್ಞೆಯಂತೆ ಪ್ರಾರಂಭವಾದ ಈ ಕೈಂಕರ್ಯವನ್ನು ಪ್ರತೀ ಶ್ರೀಕೃಷ್ಣಾಷ್ಟಮಿಯಂದು ನೆರವೇರಿಸಲಾಗುತ್ತಿದೆ ಎಂಬುದು ಉಲ್ಲೇಖನೀಯ.