ಕಾಗವಾಡ: ಉಗಾರ ಬುದ್ರುಕ ಗ್ರಾಮದಲ್ಲಿ ಶ್ರೀ ಪದ್ಮಾವತಿ ದೇವಿಯ ಹೊಳೆ ಪೂಜಾ ಕಾರ್ಯಕ್ರಮ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮಂಡಳದ ವತಿಯಿಂದ ಪದ್ಮಾದೇವಿಯ ಜಾತ್ರೆ ಸಂಭ್ರಮದಿಂದ ಜರುಗಿತು. ಹೊರರಾಜ್ಯಗಳ ಭಕ್ತರು ದೇವಿಯ ದರ್ಶನ ಪಡೆದರು. ಅ.4 ರಂದು ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, 11 ಗಂಟೆಗೆ ಅಷ್ಟಾವಧಾನ ಪೂಜೆ, 1 ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣಿಗೆ, 1ರಿಂದ 4ಗಂಟೆ ತನಕ ಪಂಚಾಮೃತ ಅಭಿಷೇಕ, ಕಳಸಾಭಿಷೇಕ ನೆರವೇರಿತು.
ಧರ್ಮಾಧಿಕಾರಿ ಶೀತಲಗೌಡ ಪಾಟೀಲ ಪೂಜೆ ನೆರವೇರಿಸಿದರು. ಅಶೋಕ ಪಂಡಿತ ಪೂಜಾ ವಿಧಾನ ನಡೆಸಿಕೊಟ್ಟರು. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಂದಿರದ ಪ್ರಮುಖರಾದ ಬಾಪುಗೌಡ ಪಾಟೀಲ, ವೃಷಭ ಪಾಟೀಲ, ಗ್ರಾಪಂ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಹಾಗೂ ಭಕ್ತರು ಇದ್ದರು.