ರಾಮದುರ್ಗ: ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದ ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಲಿಂಗಾಯತ ಧರ್ಮದ ವಿಧಿ&ವಿಧಾನದಂತೆ ಮಂಗಳವಾರ ಮಧ್ಯಾಹ್ನ ನೆರವೇರಿತು. ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು.
ಪತ್ನಿ ದೀಪಾ, ಪುತ್ರಿಯರಾದ ಅನನ್ಯ ಮತ್ತು ದತ್ಯ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಡತನದಲ್ಲಿ ಹುಟ್ಟಿ ಪತ್ರಿಕೋದ್ಯಮದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ರಾಮದುರ್ಗದ ಕೀರ್ತಿ ಹೆಚ್ಚಿಸಿದ ಪ್ರತಿಭೆ ಗುರುಲಿಂಗ ಸ್ವಾಮಿ ಹೊಳಿಮಠ ಅಗಲಿಕೆಗೆ ಇಡೀ ಪಟ್ಟಣ ಕಂಬನಿ ಮಿಡಿಯಿತು. ಶಾಸಕ ಮಹದೇವಪ್ಪ ಯಾದವಾಡ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಲ್ಲಯ್ಯ ಸ್ವಾಮೀಜಿ, ಎಸ್ಪಿ ಸಂಜೀವ ಪಾಟೀಲ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಸೇರಿ ಸಾವಿರಾರು ಜನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.