ಪಿರಿಯಾಪಟ್ಟಣ: ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹುಣಸೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪುಟ್ಟಶೆಟ್ಟಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ ವಿಭಾಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಮ್ಮಲ್ಲಿನ ಜ್ಞಾನಾರ್ಜನೆಗೆ ತಕ್ಕಂತೆ ಉದ್ಯೋಗಾವಕಾಶಗಳು ಲಭಿಸುವುದರಿಂದ ಅಧ್ಯಯನ ವಿಷಯದಲ್ಲಿ ನಿರುತ್ಸಾಹ ತೋರದೆ ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಕಲಿಯಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಪಡೆದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬಹುದು ಎಂದರು.
ಪ್ರಾಂಶುಪಾಲೆ ಡಿ.ಅಂಬಿಕಾ ಮಾತನಾಡಿ, ನಮ್ಮ ಭವಿಷ್ಯ ರೂಪಿಸುವಲ್ಲಿ ವಿದ್ಯಾರ್ಥಿ ಜೀವನ ಮಹತ್ತರ ಪಾತ್ರ ವಹಿಸಲಿದೆ. ಚೆನ್ನಾಗಿ ಓದುವ ಮೂಲಕ ಪಾಲಕರು ತಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳಬೇಕು. ತಾವು ಓದಿದ ಕಾಲೇಜಿಗೆ ಶೈಕ್ಷಣಿಕವಾಗಿ ಒಳ್ಳೆಯ ಹೆಸರು ತರುವಂತೆ ತಿಳಿಸಿದರು.
ನಿವೃತ್ತ ಉಪನ್ಯಾಸಕ ಟಿ.ರಾಜು ಮಾತನಾಡಿದರು. ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ ಚಟುವಟಿಕೆಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.
ಐಕ್ಯೂಎಸಿ ಸಂಚಾಲಕ ಸಿ.ಆರ್.ವಿಶ್ವನಾಥ್, ಸಾಂಸ್ಕೃತಿಕ ವಿಭಾಗದ ಸಂಚಾಲಕ ಎನ್.ಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಎನ್ಎಸ್ಎಸ್ ಸಂಯೋಜನಾಧಿಕಾರಿ ರಾಜಗೋಪಾಲ್, ಐಟಿ ಸಂಚಾಲಕ ಸಾಗರ್, ಇಎಲ್ ಸಿ ಸಂಚಾಲಕ ಡಾ.ಗುರುಬಸವರಾಜಸ್ವಾಮಿ ಪಂಡಿತ, ರೆಡ್ ಕ್ರಾಸ್ ಸಂಚಾಲಕಿ ಡಾ.ಶೈಲಶ್ರೀ, ಗ್ರಂಥಪಾಲಕ ಎಚ್.ರಮೇಶ್, ಅಧೀಕ್ಷಕರಾದ ಬಿ.ಜಿ.ಕವಿತಾ, ಅರುಣ್ ಕುಮಾರ್, ಉಪನ್ಯಾಸಕರಾದ ಡಾ.ಪರಮೇಶ್, ನಂಜುಂಡಸ್ವಾಮಿ, ಮಂಜುನಾಥ್, ನವೀನ್, ಚಂದು, ಅವಿನಾಶ್, ಡಾ.ಎಸ್.ಕೆ.ಮಂಜುನಾಥ್, ಸದಾಫ್, ನಾಗೇಶ್, ಯಶಸ್ವಿನಿ, ಚಿತ್ರಾ, ಶಿಲ್ಪಾ, ಅಲಿ, ಗೀತಾ, ಪ್ರೇಮಾರ್ಜುನ್, ಮಮತಾ, ಜಿ.ಮಂಜು ಮತ್ತು ವಿದ್ಯಾರ್ಥಿಗಳು ಇದ್ದರು.