ಧಾರವಾಡ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಕರೊನಾ ಹರಡುವಿಕೆ ತಡೆಗೆ ಜು. 15ರ ಬೆಳಗ್ಗೆ 10 ಗಂಟೆಯಿಂದ ಜು. 24ರ ರಾತ್ರಿ 8 ಗಂಟೆವರೆಗೆ ಜಿಲ್ಲೆಯಾದ್ಯಂತ ಲಾಕ್ಡೌನ್ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪ್ರಕಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡಬೇಕು ಎಂಬುದು ಬಹುಪಾಲು ಜನರ ಅಭಿಪ್ರಾಯವಾಗಿತ್ತು. ಮುಖ್ಯಮಂತ್ರಿಯವರೊಂದಿಗಿನ ವಿಡಿಯೋ ಕಾನ್ಪರೆನ್ಸ್ನಲ್ಲಿ ಲಾಕ್ಡೌನ್ ಅವಶ್ಯಕತೆಯನ್ನು ತಿಳಿಸಲಾಗಿದೆ. ಅವರು ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಈ ಬಗ್ಗೆ ರ್ಚಚಿಸಿದ್ದು, ಲಾಕ್ಡೌನ್ ಘೊಷಿಸಲಾಗಿದೆ ಎಂದರು.
ಲಾಕ್ಡೌನ್ಗೆ ಜನಸಾಮಾನ್ಯರು ಸಹಕರಿಸಿ ಯಶಸ್ವಿಗೊಳಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದನ್ನು ಪಾಲಿಸಬೇಕು. ಅಗತ್ಯ ಬಂದೋಬಸ್ತ್ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.
ನಿರ್ಮಾಣ ಕಾಮಗಾರಿ, ಕೈಗಾರಿಕೆ ಚಟುವಟಿಕೆ, ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ವಿನಾಯಿತಿ ನೀಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತದಿಂದ ವಿಸõತ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಶೆಟ್ಟರ್ ತಿಳಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸ್ಪಿ ವರ್ತಿಕಾ ಕಟಿಯಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಮಾರ್ಗಸೂಚಿ ಇಂದು
10 ದಿನಗಳ ಲಾಕ್ಡೌನ್ಗೆ ಸಂಬಂಧಿಸಿ ಜಿಲ್ಲಾ ದಂಡಾಧಿಕಾರಿಯವರು ಜು. 14ರಂದು ಅಧಿಕೃತ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಸಾವಿರ ದಾಟಿ ಅಪಾಯದ ಗಂಟೆ ಬಾರಿಸಿರುವುದರಿಂದ, ವೈರಾಣು ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಈ ಬಾರಿಯ ಲಾಕ್ಡೌನ್ ಆದೇಶ ಅತ್ಯಂತ ಕಠಿಣವಾಗಿ ಇರುವ ನಿರೀಕ್ಷೆ ಇದೆ. ಆದಾಗ್ಯೂ, ಜೀವನಾವಶ್ಯಕ ವಸ್ತುಗಳ ಪೂರೈಕೆ, ತುರ್ತು ಸೇವೆಗಳ ವಿಷಯದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನಿಯಮಗಳು ಜಾರಿಯಾಗಲಿವೆ.
ಬಟ್ಟೆ, ಸ್ಟೀಲ್, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ಸ್, ಪಾದರಕ್ಷೆ, ಅಲಂಕಾರಿಕ ವಸ್ತುಗಳು, ಸಲೂನ್, ಹೋಟೆಲ್, ಬಾರ್ಗಳು; ಸಾರಿಗೆ ಬಸ್, ಖಾಸಗಿ ವಾಹನಗಳ ಸಂಚಾರ ಬಂದ್ ಇರುವುದು ನಿರೀಕ್ಷಿತವಾಗಿದೆ. ಮದುವೆಯಂಥ ಸಮಾರಂಭಗಳಿಗೆ ಅನುಮತಿ ನಿರಾಕರಿಸಲಾಗುತ್ತದೆ, ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಅತ್ಯಂತ ಸೀಮಿತ ಸಂಖ್ಯೆಯ ಬಂಧುಗಳಷ್ಟೇ ಸೇರಲು ಅವಕಾಶ ನೀಡಲಾಗುತ್ತದೆ; ದೇವಾಲಯ, ಪ್ರಾರ್ಥನಾ ಮಂದಿಗಳಲ್ಲಿ ಜನ ಸೇರುವುದನ್ನು ಪೂರ್ತಿಯಾಗಿ ನಿರ್ಬಂಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಹಿಂದಿನ ಲಾಕ್ಡೌನ್ ವೇಳೆ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಅನೇಕರು ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಲ ಜಿಲ್ಲೆ ಹೆಚ್ಚು ಅಪಾಯ ಎದುರಿಸುತ್ತಿರುವುದರಿಂದ ಸ್ಥಗಿತತೆ ಆದೇಶ ಜಾರಿಗೆ ಪೊಲೀಸ್ ಇಲಾಖೆ ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.