ಎನ್.ಆರ್.ಪುರ: ನಾರಾಯಣ ಗುರುಗಳ ಸಂದೇಶ ಸಾರುವ ಉದ್ದೇಶದಿಂದ ನಾರಾಯಣ ಗುರುಗಳ ಸಂದೇಶ ರಥಯಾತ್ರೆ ಆರಂಭವಾಗಿದ್ದು ಸೆ.11ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಜಿಲ್ಲಾ ನಾರಾಯಣ ಗುರು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದರು.
ಎನ್.ಆರ್.ಪುರದ ಬಿ.ಎಚ್.ಕೈಮರದ ಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ಶುಕ್ರವಾರ ಆಗಮಿಸಿದ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ ಅಂಗವಾಗಿ ಸಂದೇಶ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ನಾರಾಯಣ ಗುರುಗಳು ಶೋಷಿತರು, ದೀನ ದಲಿತರಿಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದರು. ಕೇರಳದಲ್ಲಿ ಜನಿಸಿದ ಅವರು ವಿಶ್ವವೇ ಅವರತ್ತ ನೋಡುವಂತೆ ಮಾಡಿದ್ದರು ಎಂದರು.
ತಾಲೂಕು ನಾರಾಯಣಗುರು ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹಾತೂರು ಪ್ರಭಾಕರ್ ಮಾತನಾಡಿ, ನಾರಾಯಣ ಗುರುಗಳು ಸಂದೇಶಗಳಲ್ಲಿ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಸಾರಿದ್ದರು. ಜಾತೀಯತೆ ಪಿಡುಗಿನಿಂದ ಸಮಾಜ ದುರ್ಬಲಗೊಳ್ಳುತ್ತಿದೆ. ಜಾತೀಯತೆ ಹೋಗಲಾಡಿಸಲು ಹೋರಾಟ ಮಾಡಿದವರಲ್ಲಿ ನಾರಾಯಣ ಗುರುಗಳು ಮೊದಲಿಗರಾಗಿದ್ದರು ಎಂದು ಹೇಳಿದರು.