More

    ನಾಡದೇವಿಗೆ ಕೋಟಿ ಕಂಠದಾರತಿ

    ಬೆಳಗಾವಿ: ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿಗಳು, ಅಧಿಕಾರಿಗಳು ಭುವನೇಶ್ವರಿಗೆ ಕೋಟಿ ಕಂಠದಾರತಿ ಬೆಳಗಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಸುವರ್ಣ ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕನ್ನಡ ನೆಲ, ಜಲ, ಜನ, ಸಂಸ್ಕೃತಿ, ಪರಂಪರೆ ರಕ್ಷಣೆಗೆ ಬದ್ಧವಾಗಿರುತ್ತೇವೆ ಎಂದು ಸಾವಿರಾರು ಕನ್ನಡ ಮನಸುಗಳ ಒಕ್ಕೊರಲಿನಿಂದ ಪ್ರತಿಜ್ಞೆ ಮಾಡಿದರು.

    ಕಾರ್ಯಕ್ರಮ ಉದ್ಘಾಟಿಸಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಭಿವೃದ್ದಿಗಾಗಿ ಆಧುನಿಕ ವಾತಾವರಣಕ್ಕೆ ಒಗ್ಗಬೇಕಾಗುತ್ತದೆ. ಆದರೆ, ಅದೇ ಕಾರಣಕ್ಕಾಗಿ ನಾಡು, ನುಡಿ, ಸಂಸ್ಕೃತಿ ಮರೆತು ಮೂಢರಾಗದೆ ನಮ್ಮತನದ ಅಭಿಮಾನ ಮೆರೆಯಬೇಕು ಎಂದರು.

    ‘ಮಗುವಿಗೆ ಎದೆಹಾಲು ಕುಡಿಸಲಾರಳು ಆಧುನಿಕ ತಾಯಿ ಇವಳಯ್ಯ..ಬಾಟಲಿ ಹಾಲು ಕುಡಿಸಿ ಚಾಕಲೇಟ್ ತಿನ್ನಿಸಿ ಪಾಪ್ ಸಾಂಗ್ ಹಾಡುವಳಯ್ಯ..’ ಎಂದು ಜನಪದ ಗೀತೆ ಹಾಡುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಅವರು ಎಲ್ಲೆ ಇದ್ದರೂ, ಹೇಗೆ ಇದ್ದರೂ ಕನ್ನಡಕದ ಪ್ರತಿತಾಯಿಯೂ ಕನ್ನಡತಿಯೇ ಆಗಿರಬೇಕು ಎಂದು ಅಭಿಪ್ರಾಯಪಟ್ಟರು.
    ಸಂಸದೆ ಮಂಗಳಾ ಅಂಗಡಿ ಮಾತನಾಡಿ, ನಾಡು, ನುಡಿ ವಿಚಾರವಾಗಿ ಅಭಿಮಾನ ಬರೀ ಕೂಗಾಟ, ಪ್ರತಿಭಟನೆಗೆ ಸೀಮಿತವಾಗಬಾರದು. ಬದಲಾಗಿ ಪ್ರತಿ ಕ್ಷಣವೂ ಅದನ್ನು ಜೀವಿಸಬೇಕು ಎಂದರು.

    ಕಾರ್ಯಕ್ರಮ ಆರಂಭಕ್ಕೂ ಮುಂಚಿತವಾಗಿ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಸಂಗೀತ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ಏಕಕಾಲಕ್ಕೆ ನಾಡಗೀತೆ ಪ್ರಸ್ತುತಪಡಿಸಿದರು. ಕೋಟಿ ಕಂಠ ಗಾಯನದ ಯಶಸ್ವಿ ಬಳಿಕ ಬಲೂನ್‌ಗಳ ಎರಡು ಗುಚ್ಛಗಳನ್ನು ಆಗಸದೆತ್ತರಕ್ಕೆ ಹಾರಿ ಬಿಡಲಾಯಿತು. ಹಳದಿ ಕೆಂಪು ಬಣ್ಣದ ಬಲೂನ್‌ಗಳು ಆಗಸದಲ್ಲಿ ವರ್ಣರಂಜಿತವಾಗಿ ತೇಲಾಡಿದವು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ ಎಚ್.ವಿ., ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಡಿಸಿಪಿ ರವೀಂದ್ರ ಗಡಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಿ.ಎಸ್.ಡಿಗ್ರಜ ಸೇರಿ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಜಿಲ್ಲೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಲಿದ್ದರು. ಸುನೀತಾ ದೇಸಾಯಿ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts