ಧಾರವಾಡ: ಲಾಕ್ಡೌನ್ ಅವಧಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆಗಳು ಉಂಟಾಗದಿರಲಿ ಎಂಬ ಕಾರಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶನದ ಮೇರೆಗೆ ಜಿಲ್ಲಾದ್ಯಂತ ಎಲ್ಲ ಗ್ರಾಪಂಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದ್ದು, ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ.
ದೇವಲಿಂಗಿಕೊಪ್ಪದ ಕೆರೆಗೆ ನೀರು ಕಾಲುವೆ ನಿರ್ಮಾಣ ಕಾರ್ಯ, ಬೀರುವಳ್ಳಿ ಗ್ರಾವಪಂ ವ್ಯಾಪ್ತಿಯ ಬೆಂಡಲಗಟ್ಟಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸೇರಿ ರಸ್ತೆ, ದನದ ಕೊಟ್ಟಿಗೆ, ಬದು, ಜಂಗಲ್ ಕಟಾವು ಸೇರಿ ವಿವಿಧ ಕಾಮಗಾರಿ ಪ್ರಾರಂಭವಾಗಿವೆ.
ಲಾಕ್ಡೌನ್ ಅವಧಿಯಲ್ಲಿ ಕೈಗೊಳ್ಳಬಹುದಾದ ನರೇಗಾ ಕಾಮಗಾರಿಗಳಿಗೆ ಸರ್ಕಾರ ನಿಯಮಾವಳಿ ನೀಡಿದೆ. ಕೃಷಿ ಹೊಂಡ, ಬದು ನಿರ್ವಣ, ಎರೆಹುಳು ಗೊಬ್ಬರ ಘಟಕದಂತಹ ಚಟುವಟಿಕೆಗಳಿಗೆ ಹೆಚ್ಚು ಅವಕಾಶವಿದೆ. ಉದ್ಯೋಗ ಬಯಸುವವರು ಕೂಲಿಗಾರರಿಗೆ ಕೆಲಸ ನೀಡಲಾಗುವುದು. ಕೂಲಿ ದರವನ್ನು ಏ. 1ರಿಂದ 249 ರೂ.ದಿಂದ 275 ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಪಂ ಸಿಇಒ ಡಾ. ಬಿ.ಸಿ. ಸತೀಶ್ ತಿಳಿಸಿದ್ದಾರೆ.
ಪ್ರತಿಜ್ಞಾವಿಧಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿತ್ಯ ಕೆಲಸ ಪ್ರಾರಂಭಿಸುವ ಮುನ್ನ ಕೂಲಿಕಾರರಿಂದ ಶಪಥ ಸ್ವೀಕರಿಸಿ ಸಾಮಾಜಿಕ ಅಂತರ ಹಾಗೂ ಶುಚಿತ್ವ ಕಾಪಾಡಿಕೊಳ್ಳುವ ಜಾಗೃತಿ ಮೂಡಿಸಲಾಗುವುದು. ಕೆಲಸಗಾರರು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿಲ್ಲ. ಕೆಲಸದ ಸಂದರ್ಭದಲ್ಲಿ ಪರಸ್ಪರ ವ್ಯಕ್ತಿಗಳ ನಡುವೆ ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಲಾಗುತ್ತಿದೆ ಕಲಘಟಗಿ ತಾಪಂನ ನರೇಗಾ ಸಹಾಯಕ ನಿರ್ದೇಶಕ ಚಂದ್ರಶೇಖರ್ ಪೂಜಾರ ತಿಳಿಸಿದ್ದಾರೆ.