ಶೃಂಗೇರಿ: ವೈಶಾಖ ಶುಕ್ಲ ಚತುರ್ದಶಿಯ ಮಂಗಳವಾರ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀಭಾರತೀ ತೀರ್ಥ ಮಹಾ ಸ್ವಾಮೀಜಿ ಅವರು ನರಸಿಂಹ ಜಯಂತಿ ಪ್ರಯುಕ್ತ ಶ್ರೀಲಕ್ಷ್ಮೀನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀನರಸಿಂಹಸ್ವಾಮಿಗೆ ಶ್ರೀಗಳು ಅಭಿಷೇಕ ನೆರವೇರಿಸುವ ಸಂದರ್ಭದಲ್ಲಿ ಶ್ರೀಮಠದ ಋತ್ವಿಜರು ಪುರುಷ ಸೂಕ್ತ, ನಾರಾಯಣ ಸೂಕ್ತ, ವಿಷ್ಣು ಸೂಕ್ತವನ್ನು ಪಠನ ಮಾಡಿದರು. ವಿವಿಧ ಪುಷ್ಪಾಗಳಿಂದ ಸಾಲಂಕೃತಗೊಂಡ ಸ್ವಾಮಿಗೆ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಶ್ರೀ ಮದ್ಭಾಗವತದ ಶ್ರೀನರಸಿಂಹ ಅವತಾರ ಘಟ್ಟದ ಪಾರಾಯಣವನ್ನು ಹಿರಿಯ ಶ್ರೀಗಳು ನೆರವೇರಿಸಿದರು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ವಿಶೇಷ ಪೂಜೆಯಲ್ಲಿ ಭಾಗಿಯಾದರು.
ತಾಲೂಕಿನ ವಿದ್ಯಾರಣ್ಯಪುರದ ನರಸಿಂಹಪುರದಲ್ಲಿರುವ ಶ್ರೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಮತ್ತೆ ಶ್ರೀ ನರಸಿಂಹ ದೇವಾಲಯದಲ್ಲಿ ಮಹಾಮಂಗಳಾರತಿ, ಅಷ್ಟಾವಧನ ಸೇವೆಗಳು ನೆರವೇರಿತು.
ನರಸಿಂಹ ಸ್ವಾಮಿಗೆ ವಿಶೇಷ ಪೂಜೆ
ವಿದ್ಯಾರಣ್ಯಪುರದ ನರಸಿಂಹಪುರದಲ್ಲಿ ಮಂಗಳವಾರ ಶ್ರೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.