More

    ನರಗುಂದದಲ್ಲಿ ಮತ್ತೆ ಭೂಕುಸಿತ

    ನರಗುಂದ: ಪಟ್ಟಣದ ಸಿದ್ರಾಮೇಶ್ವರ ನಗರ ಬಡಾವಣೆಯ ಮನೆಯೊಂದರಲ್ಲಿ ಬುಧವಾರ ಮತ್ತೆ ಭೂಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಹೆಚ್ಚಿಸಿದೆ.

    ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಿದ್ರಾಮೇಶ್ವರ ನಗರ ಬಡಾವಣೆಯ ರವಿ ಚಂದ್ರಪ್ಪ ವಡ್ಡರ ಎಂಬುವರ ಮನೆಯಲ್ಲಿ ಬುಧವಾರ ಸಂಜೆ 5 ಗಂಟೆಗೆ ಏಕಾಏಕಿ ಭೂಕುಸಿತ ಉಂಟಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಎಂದಿ ನಂತೆಯೇ ರವಿ ವಡ್ಡರ ಅವರು, ಬುಧವಾರ ಬೆಳಗ್ಗೆ ಗಾರೆ (ಗೌಂಡಿ) ಕೆಲಸಕ್ಕೆ ತೆರಳಿದ್ದರು. ಅವರ ಪತ್ನಿ ರಾಧಾ ಅವರು ಪುತ್ರಿಯರಾದ ಚೈತ್ರಾ (14) ಹಾಗೂ ದೀಕ್ಷಾಳನ್ನು (4) ಮನೆಯ ಪಡಸಾಲೆಯಲ್ಲಿ ಬಿಟ್ಟು ನೀರು ತುಂಬುತ್ತಿದ್ದರು. ನೀರಿನ ಬಿಂದಿಗೆ ಹೊತ್ತು ಒಳಗಡೆ ಪ್ರವೇಶಿಸುವಾಗ ರಾಧಾ ಅವರಿಗೆ ತಮ್ಮ ಮನೆಯ ಹೊಸ್ತಿಲು ಮುಂದೆ ಅಂಗೈ ಅಗಲದ ಗುಂಡಿ ಕಾಣಿಸಿಕೊಂಡಿದೆ. ಇದರಿಂದ ತೀವ್ರ ಆತಂಕಗೊಂಡು ಬಿದ್ದಿರುವ ಗುಂಡಿ ನೋಡಲು ತೆರಳುತ್ತಿದ್ದಂತೆಯೇ ಏಕಾಏಕಿ ಭೂಕುಸಿತ ಸಂಭವಿಸಿದೆ.

    ಇದರಿಂದ ಭಯಭೀತರಾಗಿರುವ ರಾಧಾ ತಮ್ಮಿಬ್ಬರು ಮಕ್ಕಳೊಂದಿಗೆ ಹೊರಗಡೆ ಬಂದಿದ್ದಾರೆ. ಬೃಹದಾಕಾರದ ಗುಂಡಿಯಲ್ಲಿ ನೀರು ಸಂಗ್ರಹಗೊಂಡಿದೆ. ಮನೆಯ ಒಂದು ಗೋಡೆ ಸ್ವಲ್ಪ ಬಿರುಕು ಬಿಟ್ಟಿದ್ದು, ರಾತ್ರಿ ಬೇರೊಂದು ಮನೆಯಲ್ಲಿ ತಂಗಿದ್ದರು. ಒಂದು ತಿಂಗಳ ಹಿಂದಷ್ಟೇ ರವಿ ವಡ್ಡರ ಅವರ ಮನೆ ಪಕ್ಕದ ಮಂಜುನಾಥ ವಡ್ಡರ ಎಂಬುವವರ ಖಾಲಿ ನಿವೇಶನದಲ್ಲಿ ಭೂಕುಸಿತ ಸಂಭವಿಸಿತ್ತು. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಗುರುವಾರ ಪರಿಶೀಲನೆ ನಡೆಸಿ ಬಿದ್ದಿರುವ ಗುಂಡಿ ಮುಚ್ಚಿಸಿಕೊಡುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts