ಅಣ್ಣಿಗೇರಿ: ಪಟ್ಣಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ನನ್ನ ಬಹುದಿನಗಳ ಕನಸಾಗಿತ್ತು. ಅದೀಗ ನನಸಾಗುತ್ತಿರುವುದು ನನಗೆ ಖುಷಿ ತಂದಿದೆ ಎಂದು ಶಾಸಕ, ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಅಣ್ಣಿಗೇರಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಬಸಾಪುರ ಗ್ರಾಮದ ಹತ್ತಿರ ಮಲಪ್ರಭಾ ಬಲದಂಡೆ ಕಾಲುವೆಗೆ ಹೊಂದಿಕೊಂಡು ನಿರ್ವಿುಸುತ್ತಿರುವ ಕೆರೆ ಕಾಮಗಾರಿ ಸೋಮವಾರ ವೀಕ್ಷಿಸಿ ಅವರು ಮಾತನಾಡಿದರು.
ಕಾಲುವೆ ನೀರನ್ನು ಪಂಪ್ಸೆಟ್ ಮುಖಾಂತರ ಮೇಲೆತ್ತಲು ಸಮಸ್ಯೆ ಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಮತ್ತೆ ಸರ್ಕಾರದಿಂದ 30 ಲಕ್ಷ ರೂ. ಮಂಜೂರು ಮಾಡಿಸಿ ಕಾಲುವೆಯಿಂದ 5 ಕ್ಯೂಸೆಕ್ ನೀರನ್ನು ನೇರವಾಗಿ ಕೆರೆಗೆ ಹಾಯಿಸಲು ಸಣ್ಣ ಮಾರ್ಗ ನಿರ್ವಿುಸಲಾಗುತ್ತಿದೆ ಎಂದರು. ಕಾಮಗಾರಿ ಪ್ರಗತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ಮುಖಂಡ ಷಣ್ಮುಖ ಗುರಿಕಾರ, ಶಿವಯೊಗಿ ಸುರಕೋಡ, ಬಸವರಾಜ ಯಳವತ್ತಿ, ಸಿ.ಜಿ. ನಾವಳ್ಳಿ, ರಾಘವೇಂದ್ರ ರಾಮಗೇರಿ, ಪ್ರವೀಣ ಹಾಳದೋಟರ, ಮಂಜುನಾಥ ದಿಡ್ಡಿ, ಈರಣ್ಣ ಗುರಿಕಾರ, ರೈತ ಮುಖಂಡರು, ಬಸಾಪುರ ಗ್ರಾಮಸ್ಥರು ಇದ್ದರು.