ಹುಬ್ಬಳ್ಳಿ: ಮಳೆ ನೀರು ನಿಂತು ನದಿಯಂತಾಗಿದ್ದ ಇಲ್ಲಿಯ ಸುಳ್ಳ ರಸ್ತೆಯಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡರು.
ಸುಳ್ಳ ರಸ್ತೆಯ ಬಸವೇಶ್ವರ ಪಾರ್ಕ್ನಿಂದ ಸನ್ ಸಿಟಿ ಗಾರ್ಡನ್ ವರೆಗೆ ಸುಮಾರು ಒಂದು ಕಿಲೊ ಮೀಟರ್ ತನಕ ಮಳೆ ನೀರು ನಿಲ್ಲುತ್ತಿತ್ತು. ಇದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿತ್ತು. ರಸ್ತೆ ಹೊಂಡಗಳಲ್ಲಿ ಬಿದ್ದು ಅನೇಕರು ಗಾಯಗೊಂಡಿದ್ದರು.
ಶುಕ್ರವಾರ ಜೆಸಿಬಿಯಿಂದ ರಸ್ತೆ ಅಕ್ಕಪಕ್ಕದ ತ್ಯಾಜ್ಯ ತೆಗೆದು ಹಾಕಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಒಮ್ಮೆ ಮಳೆಯಾದರೆ ಎರಡು ದಿನಗಟ್ಟಲೇ ಈ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಈ ಬಗ್ಗೆ ಮಹಾನಗರ ಪಾಲಿಕೆಗೆ ಸ್ಥಳೀಯರು ದೂರು ನೀಡಿದ್ದರು. ಗುರುವಾರ ವಿಜಯವಾಣಿಯಲ್ಲಿ ‘ಭಾರಿ ಮಳೆಗೆ ನದಿಯಂತಾದ ಸುಳ್ಳ ರಸ್ತೆ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿದ್ದು ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ ಎಂದು ಸನ್ ಸಿಟಿ ಗಾರ್ಡನ್ ಕ್ಷೇಮಾಭಿವೃದ್ಧಿ ಸಂಘದ ಕುಬೇರ ಬಡಿಗೇರ, ಬಸವರಾಜ ಗೊರಣ್ಣನವರ ಇತರರು ಕೃತಜ್ಞತೆ ಸಲ್ಲಿಸಿದ್ದಾರೆ.