ದಾವಣಗೆರೆ: ಚುನಾವಣಾ ರಾಜಕಾರಣಕ್ಕಾಗಿ ವೀರಶೈವ ಲಿಂಗಾಯತ ಜಾತಿಯ ಕೆಲವರು ಬೇಡ ಜಂಗಮರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದು, ಜಿಲ್ಲಾಧಿಕಾರಿಗಳು ಇದನ್ನು ವಾರದೊಳಗೆ ತಡೆಯಬೇಕು. ಇಲ್ಲವಾದಲ್ಲಿ ಮಾ. 13ರಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆಯ ಮುಖಂಡ ಎಚ್. ಮಲ್ಲೇಶ್ ಹೇಳಿದರು.
ವಾಗೀಶಸ್ವಾಮಿ, ಮಾಯಕೊಂಡ ಮೀಸಲು ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಪೋಸ್ಟರ್, ಫ್ಲೆಕ್ಸ್ ಅಳವಡಿಸುತ್ತಿದ್ದು ಬಿಜೆಪಿ ನಾಯಕರು ತಡೆಯೊಡ್ಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಎಸಗುತ್ತಿರುವ ವಾಗೀಶಸ್ವಾಮಿ ವಿರುದ್ಧ ಜಿಲ್ಲಾಡಳಿತಕ್ಕೆ ಈ ಹಿಂದೆಯೇ ಮನವಿ ಸಲ್ಲಿಸಿದ್ದರೂ ಕ್ರಮವಾಗಿಲ್ಲ. ಜಿಲ್ಲಾಡಳಿತವೇ ಅವರ ಪರ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ ಎಂದು ದೂರಿದರು.
ಚಿನ್ನಸಮುದ್ರ ಶೇಖರನಾಯ್ಕ ಮಾತನಾಡಿ, ಮೀಸಲು ಕಸಿಯಲು ಯತ್ನಿಸುತ್ತಿರುವ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಈ ವೇಳೆ ಅಹಿತಕರ ಘಟನೆ ನಡೆದರೆ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ. ಬೇಡ ಜಂಗಮರ ಹೆಸರಲ್ಲಿ ಪ್ರಮಾಣ ಪತ್ರ ನೀಡಬಾರದು. ಹಾಗೆ ನಕಲಿ ಪ್ರಮಾಣ ಪತ್ರ ಪಡೆದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಜಿ.ಸೋಮಶೇಖರ್, ಲಕ್ಷ್ಮ್ಮಣ್ ರಾಮಾವತ್, ವೆಂಕಟೇಶ್ಬಾಬು, ಜಿ. ಎನ್. ಮಲ್ಲಿಕಾರ್ಜುನ ಇದ್ದರು.
—