ನಾಗಮಂಗಲ: ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಅಥವಾ ನಿಗದಿತ ಗುರಿ ಮುಟ್ಟುವ ಧಾವಂತಕ್ಕೊಳಗಾಗದೆ ರೈತರಿಂದ ನೈಜ ಮಾಹಿತಿ ಪಡೆದು ಬೆಳೆ ಸಮೀಕ್ಷೆ ನಡೆಸುವಂತೆ ಸಮೀಕ್ಷಾ ಸಿಬ್ಬಂದಿಗೆ ಕೃಷಿ ಇಲಾಖೆ ಉಪನಿರ್ದೇಶಕಿ ಮಾಲತಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಳೆ ವಿಮಾ ಸಮೀಕ್ಷಾ ಸಿಬ್ಬಂದಿಗೆ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಯಾವೊಬ್ಬ ರೈತರೂ ಬೆಳೆ ವಿಮಾ ಸಮೀಕ್ಷೆಯಿಂದ ವಂಚಿತರಾಗದಂತೆ ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ಜಮೀನಿನ ಬೆಳೆಯ ವರದಿಯನ್ನು ಸಮೀಕ್ಷೆಯಲ್ಲಿ ದಾಖಲಿಸಬೇಕು. ತಾವು ನಡೆಸಿದ ಬೆಳೆ ಸಮೀಕ್ಷೆಯ ಆನ್ಲೈನ್ ಅರ್ಜಿಗಳು ತಿರಸ್ಕೃತಗೊಳ್ಳದಂತೆ ಎಚ್ಚರ ವಹಿಸಿ ಸಮೀಕ್ಷೆ ನಡೆಸಿ. ನೀವು ನಡೆಸಿದ ಸಮೀಕ್ಷೆ ರೈತಾಪಿ ವರ್ಗಕ್ಕೆ ವರದಾನವಾಗಬೇಕೇ ಹೊರತು, ಯೋಜನೆಯಿಂದ ಫಲಾನುಭವಿ ಹೊರಗುಳಿಯಬಾರದು ಎಂದರು.
ಸಮೀಕ್ಷೆ ನಡೆಸುವ ವಿಷಯದಲ್ಲಿ ಯಾರೊಬ್ಬರೂ ನಿರ್ಲಕ್ಷ್ಯ ಅಥವಾ ಉದಾಸೀನತೆ ಮಾಡದೆ ಇಲಾಖಾ ನಿಯಮಾನುಸಾರ ಗುರಿ ತಲುಪುವ ಮೂಲಕ ರೈತರಿಗೆ ಸಹಕರಿಸಿ ಎಂದು ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕತೆಯ ಮೂಲಕ ವಿವರಿಸಿದರು.
ಕೃಷಿ ಅಧಿಕಾರಿಗಳಾದ ಯುವರಾಜ್, ದೇವರಾಜ್, ಪೃಥ್ವೀಶ್ರೀ, ಅನುಷಾ, ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಮಧುಸೂದನ್ ಹಾಜರಿದ್ದರು.