ಔರಾದ್: ತಾಲೂಕಿನ ಕೌಠಾ (ಬಿ) ಸೇತುವೆಯ ಕೊನೇ ಅಂಚಿನ ಒಂದು ಭಾಗವು ಕುಸಿದಿರುವ ಸಂಬಂಧ ತಾತ್ಕಾಲಿಕ ದುರಸ್ತಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೂಚಿಸಿದರು.
ಸೇತುವೆ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಸಚಿವರು, ಈಗ ಸೇತುವೆ ಅಂಚಿನಲ್ಲಿನ ಮಣ್ಣು ಕುಸಿತವನ್ನು ತಡೆಯಲು ತಾತ್ಕಾಲಿಕ ತುರ್ತಾಗಿ ದುರಸ್ತಿ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಿ. ಈ ರಸ್ತೆ ಮೇಲೆ ಭಾರವಾದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕೌಠಾ ಸೇತುವೆ ನಿರ್ಮಾಣವಾಗಿ 50 ವರ್ಷ ಗತಿಸಿವೆ. ಮಳೆಯಾದ ಹಿನ್ನೆಲೆಯಲ್ಲಿ ಸೇತುವೆ ಕೊನೆಯ ಅಂಚಿನ ಒಂದು ಭಾಗ ಕುಸಿಯುತ್ತಿದ್ದು, ಇದರ ದುರಸ್ತಿಗೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಹೇಳಿದರು.
336 ಕೋಟಿ ರೂ. ಅನುದಾನದಲ್ಲಿ ಬೀದರ್-ಔರಾದ್ ಹೆದ್ದಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆಗಿದೆ. ಕಾಮಗಾರಿಯಲ್ಲಿ ಕೌಠಾ ಸೇತುವೆ ಹೊಸದಾಗಿ ನಿರ್ಮಾಣ ಮಾಡುವದು ಸಹ ಸೇರಿದೆ. ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿದೆ. ಬೀದರ್-ಔರಾದ್ ರಸ್ತೆ ಬಹಳ ಕೆಟ್ಟಿರುವುದರಿಂದ ಜನರಿಗೆ ಸಂಚರಿಸಲು ಸಾಕಷ್ಟು ತೊಂದರೆಯಾಗುತ್ತಿದೆ ಎಂಬುದು ಗೊತ್ತಿದೆ ಎಂದರು.
ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಎಸ್ಪಿ ಡಿ.ಎಲ್.ನಾಗೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್, ಡಿವೈಎಸ್ಪಿ ಬಸವೇಶ್ವರ ಹೀರಾ, ಸಂತಪುರ ಠಾಣೆ ಪಿಎಸ್ಐ ಸುವರ್ಣ ಇತರರಿದ್ದರು.