ಚನ್ನರಾಯಪಟ್ಟಣ: ತಾಲೂಕಿನ ದಿಡಗ ಗ್ರಾಮದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಗೌರಿ ಹಾಗೂ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮವು ಬುಧವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ಮಂಟಪದಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹೆಣ್ಣು ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡು ಸಿಹಿ ಕಡುಬು, ಸಜ್ಜಿಗೆ, ಲಡ್ಡು ಹಾಗೂ ಹಣ್ಣುಗಳನ್ನು ಅರ್ಪಿಸಿ ದರ್ಶನ ಪಡೆದರು. ಹಿಂದಿನ ದಿನವಾದ ಮಂಗಳವಾರ ಮುಂಜಾನೆ ಗೌರಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಪ್ರಧಾನ ಅರ್ಚಕರಾದ ರಾಮಚಂದ್ರಯ್ಯ ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಕೆ.ಪಿ.ರಾಮಕೃಷ್ಣ, ಖಜಾಂಚಿ ಎಸ್.ಕುಮಾರ್, ಕಾರ್ಯದರ್ಶಿ ಪ್ರಕಾಶ್, ಉಪ ಕಾರ್ಯದರ್ಶಿ ಎಚ್.ಆರ್.ಮಹೇಶ್, ಸದಸ್ಯರಾದ ಕೆ.ಪಿ.ಪುಟ್ಟರಾಜು, ಅನಂತ್, ಮೋಹನ್ ಬಾಬು ಇತರರು ಪಾಲ್ಗೊಂಡಿದ್ದರು.