ಧಾರವಾಡ: ನಾಡಿನಲ್ಲಿ ಆಗಿ ಹೋಗಿರುವ ಹರಿದಾಸರು, ಶರಣರು ಜನಸಾಮಾಮಾನ್ಯರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಕನ್ನಡದಲ್ಲಿ ಸರಳ ಕೀರ್ತನೆ, ವಚನಗಳನ್ನು ರಚಿಸಿ ಜಾಗೃತಿ ಉಂಟು ಮಾಡಿದ್ದಾರೆ ಎಂದು ಚಿನ್ಮಯ ಮಿಷನ್ ಕೇಂದ್ರ ಮುಖ್ಯಸ್ಥ ಶ್ರೀ ಕೃತಾತ್ಮನಂದ ಸ್ವಾಮೀಜಿ ಹೇಳಿದರು.
ನಗರದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶ್ರೀ ಶ್ರೀನಿವಾಸ ಕಲಾಸಂಗಮ ಹಾಗೂ ಕಲಾಶ್ರೀ ಸಾಂಸ್ಕೃತಿಕ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ದಾಸ ಶ್ರೇಷ್ಠ ಶ್ರೀ ಪುರಂದರದಾಸರ ಸಾಹಿತ್ಯಾಧಾರಿತ ‘ಭಾವನೆಗಳ ಸ್ಪಂದನ’ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಹಾಗೂ ಚಿತ್ರಕಲಾ ಪ್ರದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮಾತನಾಡಿ, ಹರಿದಾಸರು ಕನ್ನಡ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ದಾಸರು, ಶರಣರು ತೋರಿದ ಸನ್ಮಾರ್ಗದಲ್ಲಿ ಸಾಗಬೇಕು. ದಾರ್ಶನಿಕರ ಸಾಹಿತ್ಯಾಧಾರಿತ ನಾಟಕ ಪ್ರದರ್ಶನದಿಂದ ಸಮಾಜ ಸುಧಾರಣೆ ಮಾಡಬಹುದು ಎಂದರು.
ಸಾಹಿತಿ ರಂಜಾನ ದರ್ಗಾ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಕುಲಕರ್ಣಿ, ಡಾ. ಇಸಾಬೆಲ್ಲಾ ಝೇವಿಯರ್, ಶ್ರೀ ಶ್ರೀನಿವಾಸ ಕಲಾಸಂಗಮ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಮಾಣಿಕ್ಯಂ, ಕಲಾಶ್ರೀ ಸಾಂಸ್ಕೃತಿಕ ಸಂಘ ಅಧ್ಯಕ್ಷ ವಾಸುದೇವ ಮಹಾಲೆ, ಇತರರಿದ್ದರು. ಶ್ರೀದೇವಿ ಕತ್ತಿ ಸ್ವಾಗತಿಸಿದರು. ರತ್ನಾ ಕುಲಕರ್ಣಿ ವಂದಿಸಿದರು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಂ.ಜಿ. ಬಂಗ್ಲೆವಾಲೆ, ಮೋಹನ ಮೋರೆ, ಪ್ರಭು ಹಂಚಿನಾಳ, ಜೋಸೆಫ್ ಪ್ಲೇಚರ್ ಹೇಮಾ ಮಾಘಮೋಡೆ, ಡಾ. ಪದ್ಮಿನಿ ಓಕ್, ಐರಿನ್ ಮುರನಾಳ ಅವರಿಗೆ ‘ಶ್ರೀ ಶ್ರೀನಿವಾಸ ಕಲಾಸಂಗಮ ಪ್ರಶಸ್ತಿ’ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಾಕ್ಷಿ ಕಲ್ಲೂರ, ಅನುಷಾ ಗೌರಿ, ದೀಪ್ತಿ ಪಾಟೀಲ, ಆಂಜನೇಯ ಭಜಂತ್ರಿ, ಸುಪ್ರಜಾ ಕಾಮತಗೆ ‘ಶ್ರೀ ಶ್ರೀನಿವಾಸ ಕಲಾಸಂಗಮ ಮಕ್ಕಳ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.