ಸೊರಬ: ಡೀಸೆಲ್, ಪೆಟ್ರೋಲ್ಗೆ ಶೇ.70 ತೆರಿಗೆ ವಿಧಿಸುವ ಮೂಲಕ ಪ್ರತಿದಿನ ತೈಲ ಬೆಲೆ ಗಗನಕ್ಕೇರಿಸಿ ಸರ್ಕಾರ ಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದೆ. ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ, ಜನವಿರೋಧಿ ಸರ್ಕಾರ ಇದು ಎಂದು ಕಾಂಗ್ರೆಸ್ ಮುಖಂಡ ರಾಜು ಎಂ.ತಲ್ಲೂರು ಆರೋಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ವೈರಸ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಕರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಭೂಸುಧಾರಣಾ ಕಾನೂನು ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿ ಅನೇಕ ಜನವಿರೋಧಿ ಕಾನೂನು ಜಾರಿಗೊಳಿಸಲು ಹೊರಟಿರುವುದು ಕುತಂತ್ರಿ ಬುದ್ಧಿ ಎತ್ತಿ ತೋರಿಸುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ತಾಲೂಕಿನ ಆಡಳಿತ ದಿಕ್ಕು ದೆಸೆ ಇಲ್ಲದಂತೆ ನಡೆಯುತ್ತಿದ್ದು ಶಾಸಕ ಕುಮಾರ್ ಬಂಗಾರಪ್ಪ ತಾಲೂಕು ಹಾಗೂ ಜನಸಾಮಾನ್ಯರಿಗೆ ಕರೊನಾ ಮಹಾಮಾರಿ ಇದ್ದಂತೆ. ಅವರ ದರ್ಪದಿಂದ 2 ವರ್ಷದಲ್ಲಿ 10 ಜನ ತಹಸೀಲ್ದಾರ್ ಬಂದು ಹೋಗಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮವನ್ನು ಜು.2ರಂದು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಜ್ಞಾ ದಿನವನ್ನಾಗಿ ಆಚರಿಸುತ್ತಿದೆ. ತಾಲೂಕಿನ 51 ಗ್ರಾಪಂ ಮಟ್ಟದಲ್ಲಿಯೂ ಆಚರಿಸುವ ಜತೆಗೆ ಕಾರ್ಯಕ್ರಮವನ್ನು ಟಿವಿ ಮೂಲಕ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಆ ಕಾರ್ಯಕ್ರಮದಲ್ಲಿ ಸಂವಿಧಾನದ ಮಹತ್ವ ಹಾಗೂ ಅಂಬೇಡ್ಕರ್ ಚಿಂತನೆ ಜನರಿಗೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ.ಪಾಟೀಲ್, ಕಾರ್ಯದರ್ಶಿ ಕೆರಿಯಪ್ಪ, ಇ.ಎಚ್.ಮಂಜುನಾಥ್, ರೇವಣಪ್ಪ, ಅಣ್ಣಪ್ಪ, ಪುಟ್ಟಪ್ಪ, ಶಿವಪ್ಪ, ಶಿವರಾಜ್, ಇಂಧುದರ್ ಇತರರಿದ್ದರು.