ಹುಣಸೂರು : ರಾಷ್ಟ್ರಾದ್ಯಂತ ಮನೆ ಮಾತಾಗಿರುವ ನಂದಿನಿ ಹೈನುಗಾರಿಕೆ ಉತ್ಪನ್ನಗಳ ಸಂಸ್ಥೆಯನ್ನು ಗುಜರಾತಿನ ಅಮೂಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಹುನ್ನಾರ ರಾಜ್ಯ ಸರ್ಕಾರ ನಡೆಸಿದೆ ಎಂದು ಆರೋಪಿಸಿ ರೈತ ಸಂಘ ಪ್ರತಿಭಟನೆ ನಡೆಸಿತು.
ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರೈತ ಸಂಘದ ಸದಸ್ಯರು, ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ ರದ್ದು, ಭೂ ಸುಧಾರಣಾ ಕಾಯ್ದೆಯನ್ನು ದುರ್ಬಲಗೊಳಿಸುವ ಮುಂತಾದ ಕ್ರಮಗಳನ್ನು ಅನುಸರಿಸಿ ಕೃಷಿಕ ಸಂಸ್ಕೃತಿಯನ್ನು ನಾಶಗೊಳಿಸಲು ಯತ್ನಿಸಿದೆ. ಇದೀಗ ದೇಶಾದ್ಯಂತ ಮನೆ ಮಾತಾಗಿರುವ ನಂದಿನಿ ಹಾಲು ಉತ್ಪನ್ನಗಳ ಸಂಸ್ಥೆಯನ್ನು ಗುಜರಾತಿನ ಅಮೂಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಲು ಮುಂದಾಗಿರುವುದು ಖಂಡನೀಯ.
ಖಾಸಗೀಕರಣದ ಹೆಸರಿನಲ್ಲಿ ಕೃಷಿ ಕಸುಬನ್ನೇ ನಾಶಪಡಿಸಲು ಸರ್ಕಾರ ಹೊರಟಿದ್ದು, ಈ ಕೂಡಲೇ ನಂದಿನಿ-ಅಮೂಲ್ ವಿಲೀನದ ಪ್ರಕ್ರಿಯೆನ್ನು ಸರ್ಕಾರ ರದ್ದುಪಡಿಸಿ ನಂದಿನಿಯನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರು. ನಂತರ ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಶಿವಣ್ಣ, ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ವಿಷಕಂಠಪ್ಪ ಇತರರು ಇದ್ದರು.