ವಿಜಯಪುರ: ರಾಜ್ಯಾದ್ಯಂತ ಮೀಸಲಾತಿ ಹೋರಾಟ ಚುರುಕುಗೊಂಡಿರುವ ಬೆನ್ನಲ್ಲೇ ತಳವಾರ ಮತ್ತು ಪರಿವಾರ ಸಮಾಜ ಉಪ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದೆ.
ಮೀಸಲಾತಿಗಾಗಿ ಹಲವು ಸಮುದಾಯಗಳು ಹೋರಾಟ ನಡೆಸುತ್ತಿವೆ. ಆದರೆ, ಸಿಕ್ಕಿರುವ ಮೀಸಲಾತಿಯನ್ನೇ ಸರ್ಕಾರ ಕಸಿದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಿದ್ದರೂ ರಾಜ್ಯ ಸರ್ಕಾರದ ಧೋರಣೆಯಿಂದ ಈವರೆಗೂ ಜಾತಿ ಪ್ರಮಾಣ ಸಿಗುತ್ತಿಲ್ಲ. ಹೀಗಾಗಿ ಮಸ್ಕಿ, ಬಸವ ಕಲ್ಯಾಣ, ಸಿಂದಗಿ ವಿಧಾನ ಸಭೆ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ ಬಹಿಷ್ಕಾರದ ಮೂಲಕ ಹೋರಾಟಕ್ಕೆ ಅಣಿಯಾಗುತ್ತಿರುವುದಾಗಿ ತಳವಾರ- ಪರಿವಾರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಶಿವಾಜಿ ಮೆಟಗಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ
ತಳವಾರ ಮತ್ತು ಪರಿವಾರ
ಸಮುದಾಯಕ್ಕೆ ಎಸ್ಟಿ ಮಾನ್ಯತೆ ಕಲ್ಪಿಸಲು ರಾಜ್ಯ ಸರ್ಕಾರ ಪತ್ರ ಹೊರಡಿಸಿ ಹಲವು ತಿಂಗಳು ಕಳೆದಿವೆ. ಆದರೆ ರಾಜ್ಯ ಸರ್ಕಾರ ಕೆಲವು ಪ್ರಭಾವಿ ಸಚಿವರ ಕುತಂತ್ರಕ್ಕೆ ಮಣಿದು ಜಾತಿ ಪ್ರಮಾಣ ಪತ್ರ ತಡೆ ಹಿಡಿದಿದೆ. ಸರ್ಕಾರದ ಆದೇಶ ಸ್ಪಷ್ಟವಾಗಿದ್ದರೂ ಅಧಿಕಾರಿಗಳು ಸಹ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಮೆಟಗಾರ ಆರೋಪಿಸಿದ್ದಾರೆ.
ಸರ್ಕಾರದ ಈ ಧೋರಣೆಯಿಂದಾಗಿ ಈಗಾಗಲೇ ಗ್ರಾಪಂ ಚುನಾವಣೆಯಲ್ಲಿ ಸಮುದಾಯದವರು ಮೀಸಲಾತಿಯಿಂದ ವಂಚಿತಗೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯಿಂದ ವಂಚಿತಗೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ತಾಪಂ, ಜಿಪಂ ಚುನಾವಣೆ ಎದುರಾಗುತ್ತಿವೆ. ಹೀಗಾಗಿ ಕೂಡಲೇ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಚುನಾಚಣೆ ಬಹಿಷ್ಕರಿಸುವುದರ ಜೊತೆಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮೆಟಗಾರ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.