ಗೋಕರ್ಣ: ತದಡಿ ಬಂದರು ಬಳಿ ಆಳ ಸಮುದ್ರ ಮೀನುಗಾರಿಕೆ ಬೋಟ್ ಶುಕ್ರವಾರ ಮಧ್ಯಾಹ್ನ ಮುಳುಗಿದ್ದು, ಅದರಲ್ಲಿದ್ದ 14 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮುಳುಗಿದ ದುರ್ಗಾ ಭೈರವಿ ಹೆಸರಿನ ಪರ್ಸೆನ್ ಬೋಟ್ ಮಿರ್ಜಾನದ ವೆಂಕಟ್ರಮಣ ಹೊಸಬು ಅಂಬಿಗ ಎನ್ನುವವರಿಗೆ ಸೇರಿದ್ದಾಗಿದೆ. ಬುಧವಾರ ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟ್ ಶುಕ್ರವಾರ ತಿರುಗಿ ಬರುತ್ತಿರುವಾಗ ಈ ಅವಘಡ ನಡೆದಿದೆ. ಘಟನೆ ಬಗ್ಗೆ ವೈಯರ್ಲೆಸ್ ಸಂದೇಶ ಪಡೆದ ಮಾದನಗೇರಿಯ ಉದಯ ಗುಣ್ಯ ತಾಂಡೇಲ ಅವರಿಗೆ ಸೇರಿದ ಸರ್ವಲಕ್ಷ್ಮೀ ಬೋಟ್ನಲ್ಲಿದ್ದ 4 ಮೀನುಗಾರರು ಕೂಡಲೆ ಸ್ಥಳಕ್ಕೆ ಹೋಗಿ ಎಲ್ಲರನ್ನು ರಕ್ಷಿಸಿದ್ದಾರೆ.