ಧಾರವಾಡ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಘೊಷಣೆ ಮಾಡಿರುವ ಹಿನ್ನೆಲೆಯಲ್ಲಿ ಊಟ, ವಸತಿ ಇಲ್ಲದೆ ನಿರಾಶ್ರಿತರಾದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ 650ಕ್ಕೂ ಹೆಚ್ಚು ಜನರಿಗೆ ಜಿಲ್ಲಾಡಳಿತ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆದು, ಆಶ್ರಯ ನೀಡಿ ರಕ್ಷಿಸುತ್ತಿದೆ.
ಹುಬ್ಬಳ್ಳಿ, ಧಾರವಾಡ ಮತ್ತು ಅಳ್ನಾವರ ಪಟ್ಟಣಗಳಲ್ಲಿನ ಸುಮಾರು ಎಂಟು ಪರಿಹಾರ ಕೇಂದ್ರಗಳನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಆರಂಭಿಸಲಾಗಿದೆ. ಪರಿಹಾರ ಕೇಂದ್ರ ನಿವಾಸಿಗಳಿಗೆ ಸರ್ಕಾರದ ಬಿಸಿಯೂಟ ಯೋಜನೆ, ವಿವಿಧ ಸಂಘ, ಸಂಸ್ಥೆ, ದಾನಿಗಳ ನೆರವಿನಿಂದ ಊಟ, ಉಪಾಹಾರ ಮತ್ತು ಜಿಲ್ಲಾಡಳಿತದಿಂದ ಸ್ವಚ್ಛತಾ ಕಿಟ್ ವಿತರಿಸಲಾಗಿದೆ.
ತಜ್ಞರಿಂದ ಕೌನ್ಸೆಲಿಂಗ್: ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿರುವವರು ವೈರಸ್ ಕುರಿತು ಭಯ, ಆತಂಕಕ್ಕೆ ಒಳಗಾಗಬಾರದು. ಕುಟುಂಬ ಸದಸ್ಯರಿಂದ ದೂರವಿರುವುದರಿಂದ, ಆರ್ಥಿಕ ಸಮಸ್ಯೆ ಅಥವಾ ಮದ್ಯಪಾನ, ತಂಬಾಕು ಸೇವನೆಯಂತಹ ದುಶ್ಚಟಗಳಿಗೆ ಅವಕಾಶವಿಲ್ಲದ್ದರಿಂದ ಖಿನ್ನತೆ, ಮಾನಸಿಕ ಸಮಸ್ಯೆಗಳಿಗೆ ಒಳಗಾಗಬಾರದೆಂದು ಜಿಲ್ಲಾಡಳಿತ ತಜ್ಞ ವೈದ್ಯರಿಂದ ಕೇಂದ್ರದ ವಾಸಿಗಳಿಗೆ ಆಪ್ತಸಮಾಲೋಚನೆ ಶಿಬಿರ ಆರಂಭಿಸಿದೆ.
ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಹಾಗೂ ಕಿಮ್ಸ್ನ ಮನೋರೋಗ ವಿಭಾಗದ ತಜ್ಞ ವೈದ್ಯರ 6 ತಂಡಗಳನ್ನು ಜಿಲ್ಲಾಡಳಿತ ಸಿದ್ಧಗೊಳಿಸಿದೆ. ಈ ತಂಡಗಳು ನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಒಂದೊಂದು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಣ್ಣ ಗುಂಪುಗಳನ್ನಾಗಿ ರೂಪಿಸಿ ಜಾಗೃತಿ ಮೂಡಿಸುತ್ತಿದೆ.
ಸಣ್ಣ ಪ್ರಮಾಣದ ಮಾನಸಿಕ ರೋಗ ಅಥವಾ ಖಿನ್ನತೆ ಕಾಣಿಸಿದರೆ ಸ್ಥಳೀಯ ಆಪ್ತ ಸಮಾಲೋಚನೆ ಮೂಲಕ ಪರಿಹರಿಸಲಾಗುತ್ತದೆ. ಮಧ್ಯಮ ಹಾಗೂ ದೊಡ್ಡ ಪ್ರಮಾಣದಲ್ಲಿದ್ದರೆ ಡಿಮ್ಹಾನ್ಸ್ನಿಂದ ಉಚಿತವಾಗಿ ಮಾತ್ರೆ, ಔಷಧ ನೀಡಿ ಗುಣಪಡಿಸಲಾಗುತ್ತದೆ. ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ನೇತೃತ್ವದ ತಜ್ಞ ವೈದ್ಯರ ತಂಡ ಪರಿಹಾರ ಕೇಂದ್ರದಲ್ಲಿನ ನಿರಾಶ್ರಿತ, ವಲಸಿಗ, ವಲಸೆ ಕಾರ್ವಿುಕರಿಗೆ ಆಪ್ತ ಸಮಾಲೋಚನೆ, ವ್ಯಾಯಾಮ, ಆಹಾರ ಸೇವನೆ, ಯೋಗ, ನಿದ್ದೆ ಮಾಡುವ ವಿಧಾನ ಸೇರಿ ಆರೋಗ್ಯಕರ ಜೀವನ ಶೈಲಿಯ ವಿವಿಧ ವಿಧಾನಗಳನ್ನು ತಿಳಿಸುವ ಮೂಲಕ ಮಾನಸಿಕ ಸ್ಥೈರ್ಯ ತುಂಬುತ್ತಿದ್ದಾರೆ.