ಮುಳಬಾಗಿಲು: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಹಲವು ಅವಾಂತರ ಸೃಷ್ಟಿಸಿದೆ. ರಾಜಕಾಲುವೆಗಳ ನೀರು ರಸ್ತೆಗೆ ಹರಿದಿದೆ. ಗುಣಿಗಂಟಿಪಾಳ್ಯ, ಸಂತೆಮೈದಾನ, ಅಂಬೇಡ್ಕರ್ ನಗರದ ಪ್ರಾಥಮಿಕ ಶಾಲೆ, ಷಾಮೀರ್ ಮೊಹಲ್ಲಾದ ಹಲವಾರು ಮನೆಗಳಿಗೆ ನೀರು ನುಗ್ಗಿದೆ.
ಮಂಗಳವಾರ ಮಧ್ಯಾಹ್ನ ಊರುಕುಂಟೆ ಮಿಟ್ಟೂರು ಕೆರೆ-ಕಟ್ಟೆ ಒಡೆದಿದೆ. ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ತುಂಬಿದ್ದು, ಕೆಲವು ಶಿಥಿಲಾವಸ್ಥೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಉಪವಿಭಾಗಾಧಿಕಾರಿ ಆನಂದ್ಪ್ರಕಾಶ್ಮೀನ, ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಸೇರಿ ಅಧಿಕಾರಿಗಳ ತಂಡ ಕೆರೆಗಳನ್ನು ಪರಿಶೀಲಿಸಿದ್ದು, ಮುನ್ನೆಚ್ಚರಿಕೆ ಕೈಗೊಳ್ಳುತ್ತಿದೆ. ಮಳೆಯಾದ ರಸ್ತೆ ಅವ್ಯವಸ್ಥೆ ಮತ್ತು ಕೆರೆ-ಕಟ್ಟೆ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ ಪರಿಣಾಮ ಅನಾಹುತ ಉಂಟಾಗಿದೆ.
ನಗರದಲ್ಲಿ ಹಾದುಹೋಗಿರುವ ರಾ.ಹೆ 75ರಲ್ಲಿ ಸೋಮವಾರ ಸಂಜೆ ಸೋಮೇಶ್ವರಪಾಳ್ಯ ಗುಣಿಗಂಟಿಪಾಳ್ಯ ಮಧ್ಯೆ ಇರುವ ರಾಜಕಾಲುವೆಯಲ್ಲಿ ನೀರು ಹರಿಯದೆ ರಸ್ತೆಗೆ ಹರಿದು ಸಂಚಾರಕ್ಕೂ ಸಮಸ್ಯೆಯಾಯಿತು.
ಮಲ್ಲನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಳಗಾನಹಳ್ಳಿ, ದೊಮ್ಮಸಂದ್ರ, ವೇಗಮಡಗು ಕೆರೆಗಳು ಕೋಡಿ ಹರಿಯುತ್ತಿದ್ದು ಪಕ್ಕದ ಆಂಧ್ರದ ಕೈಗಲ್ ಫಾಲ್ಸ್ಗೆ ಜೀವಕಳೆ ಉಂಟಾಗಿದೆ. ಮುಳಬಾಗಿಲು ಅಂಜನಾದ್ರಿ ಬೆಟ್ಟ, ಕುರುಡುಮಲೆ ಕೌಂಡಿನ್ಯ ನದಿ ಪಾತ್ರದ ಕೆರೆಗಳು ತುಂಬಿ ಕೋಡಿ ಹರಿಯುತ್ತಿದೆ. ಕುರುಡುಮಲೆ, ಸಿದ್ದಘಟ್ಟ, ಮಾದಘಟ್ಟ, ಸಂಗಸಂದ್ರ, ಗೋಕುಂಟೆ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಹನುಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಮನಹಳ್ಳಿ, ಮೇಲೇರಿ, ನಲ್ಲೂರು ಕೆರೆಗಳು ಕೋಡಿ ಹರಿಯುತ್ತಿವೆ, ಮುಳಬಾಗಿಲು ನಗರದ ಸೋಮೇಶ್ವರ ಕೆರೆ, ಇಂಡ್ಲುಕೆರೆ, ದೊಡ್ಡಪಾಪನಕೆರೆ, ದಾರೇನಹಳ್ಳಿ, ಸೀಗೇನಹಳ್ಳಿ, ಅಣೆಹಳ್ಳಿ ಕೆರೆಗಳು ಕೋಡಿ ಹರಿದಿವೆ.