ಕಟ್ಟೆಮಳಲವಾಡಿ: ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಗೆ ಶಾಸಕ ಎಚ್.ಪಿ.ಮಂಜುನಾಥ್ ಶನಿವಾರ ಭೇಟಿ ನೀಡಿ, ಖರೀದಿಸುವ ಕಂಪನಿಗಳು ರೈತರಿಗೆ ಉತ್ತಮ, ಸರಾಸರಿ ಬೆಲೆ ನೀಡುವ ಮೂಲಕ ಪ್ರೋತ್ಸಾಹಿಸುವಂತೆ ತಿಳಿಸಿದರು.
ಕಟ್ಟೆಮಳಲವಾಡಿ ಮಾರುಕಟ್ಟೆಯಲ್ಲಿ ಶುಕ್ರವಾರದವರೆಗೆ 248 ರೂ.ಗೆ ಉತ್ತಮ ತಂಬಾಕು ಮಾರಾಟವಾಗಿದೆ. ಆದರೆ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ 250 ರೂ.ಗೆ ಮಾರಾಟವಾಗುತ್ತಿದೆ. ಆದ್ದರಿಂದ ಇಲ್ಲಿಯೂ 250 ರೂ.ಗೆ ಮಾರಾಟ ಮಾಡಿಸುವಂತೆ ಹರಾಜು ಅಧೀಕ್ಷಕ ಧನ್ರಾಜ್ ಅವರಿಗೆ ಸೂಚಿಸಿದರು. ಶಾಸಕರ ಸೂಚನೆಯಿಂದಾಗಿ ಶನಿವಾರ ಉತ್ತಮ ದರ್ಜೆಯ ತಂಬಾಕು 251 ರೂ.ಗೆ ಮಾರಾಟವಾಗಿದ್ದರಿಂದ ರೈತರು ಸಂತಸ ವ್ಯಕ್ತಪಡಿಸಿದರು.
ಮಟ್ಟಪ್ಪಲ್ಲಿ ಕಂಪನಿಯ ಬೈಯರ್ ಕೂಸಪ್ಪ, ಕಾಂಗ್ರೆಸ್ ಕಾರ್ಯಕರ್ತರಾದ ವೆಂಕಟರಮಣ, ಸೋಮು, ಶ್ರೀಧರ, ರಾಜು ಇತರರು ಇದ್ದರು.