ಕಟ್ಟೆಮಳಲವಾಡಿ: ಕೆಲವು ದಿನಗಳಿಂದ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಕಟ್ಟೆಮಳಲವಾಡಿ ಗ್ರಾಮದ ನಿವಾಸಿಗಳ ಮನೆಗಳು ಜಲಾವೃತಗೊಂಡಿದ್ದು ಶನಿವಾರ ಇಡಿ ರಾತ್ರಿ ಜನರು ಜಾಗರಣೆ ಮಾಡುವಂತಾಯಿತು.
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಜನತೆ ತತ್ತರಿಸಿ ಮನೆಯಲ್ಲಿದ್ದ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಸೇರಿದಂತೆ ಮನೆಯ ಸದಸ್ಯರನ್ನು ಬೇರೆ ಕಡೆಗೆ ರಾತ್ರೋರಾತ್ರಿ ಕಳುಹಿಸಿದ್ದಾರೆ.
ಗ್ರಾಮದ ಸಿಲುಬು ಕೆರೆಯ ನೀರು ಹೆಚ್ಚು ತುಂಬಿರುವುದರಿಂದ ಹೆಚ್ಚುವರಿ ನೀರು ಚರಂಡಿಯಲ್ಲಿ ನುಗ್ಗಲಾರದೆ ಕೆಲವು ಕಡೆ ಚರಂಡಿ ಕಟ್ಟಿಕೊಂಡು ಮತ್ತೆ ಕೆಲವು ಕಡೆ ಚರಂಡಿಯ ಸೈಡ್ವಾಲ್ ಮುರಿದು ಬಿದ್ದ ಪರಿಣಾಮ ನಾಗರಾಜು ಎಂಬುವರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ನಂದಿ ಸರ್ಕಲ್ ಬಳಿ ಇರುವ ರಾಜು, ದಾಸಯ್ಯ, ಮಹಮ್ಮದ್ ಅಕ್ತರ್, ಮಹಮ್ಮದ್ ಇನಾಯತ್, ಅಯೂಬ್, ಶೇಖರ್, ಮಂಜುಳಾ, ಮಂಜಯ್ಯ ಹಾಗೂ ಸೋಮೇಗೌಡ ಅವರ ಮನೆಗೆ ನೀರು ನುಗ್ಗಿ ಇಡೀ ರಾತ್ರಿ ನಿದ್ರಿಸದೆ ಮನೆಯಲ್ಲಿದ್ದ ಸಾಮಾನುಗಳನ್ನು ಬೇರೆ ಕಡೆಗೆ ಸಾಗಿಸಿದ್ದಾರೆ. ಮತ್ತೆ ಕೆಲವರ ಆಹಾರ ಪದಾರ್ಥಗಳು ನೀರು ಪಾಲಾಗಿವೆ.
ಸ್ಳಳಕ್ಕೆ ಶಾಸಕ ಭೇಟಿ: ಶಾಸಕ ಎಚ್.ಪಿ.ಮಂಜುನಾಥ್ ಬೇಟಿ ನೀಡಿ ಸರ್ಕಾರದಿಂದ ದೊರೆಯುವ ಸವಲತ್ತನ್ನು ನೊಂದ ಫಲಾನುಭವಿಗಳಿಗೆ ಶೀಘ್ರ ಕೊಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ, ತಹಸೀಲ್ದಾರ್ ಅಶೋಕ್, ಪಿಡಿಒ ವಿಜಯಲಕ್ಷ್ಮೀ, ಆರ್ಐ ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ವರ್ಷಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಟರಾಜು, ತಗಡಯ್ಯ, ಶಿವು, ಬವರಾಜ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.