More

    ಟೋಲ್ ದುರಾಸೆಗೆ ಜೀವಗಳ ಬಲಿ!

    ಧಾರವಾಡ: ಜ. 14ರಂದು ಟೆಂಪೋ- ಕಾರು ಮಧ್ಯೆ ಮುಖಾಮುಖಿ ಡಿಕ್ಕಿ… ಕೊಪ್ಪಳದ ಒಂದೇ ಕುಟುಂಬದ ನಾಲ್ವರ ದುರ್ಮರಣ. ಇಬ್ಬರಿಗೆ ಗಂಭೀರ ಗಾಯ. ಜ. 26ರಂದು 2 ಕಾರುಗಳ ಮುಖಾಮುಖಿ ಡಿಕ್ಕಿ… ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ, ಕಾರು ಚಾಲಕ ಹಾಗೂ ಮತ್ತೊಂದು ಕಾರ್​ನಲ್ಲಿದ್ದ ಇಬ್ಬರ ದಾರುಣ ಸಾವು. ಮೂವರಿಗೆ ಗಂಭೀರ ಗಾಯ…

    ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದ ನರೇಂದ್ರ ಕ್ರಾಸ್​ನಿಂದ ಹುಬ್ಬಳ್ಳಿಯ ಗಬ್ಬೂರವರೆಗಿನ ಬೈಪಾಸ್​ನಲ್ಲಿ ಇಂಥ ಭೀಕರ ಅಪಘಾತಗಳು ಮರುಕಳಿಸುತ್ತಲೇ ಇವೆ. ಬೈಕ್, ಕಾರ್, ಬಸ್, ಲಾರಿ ಅಪಘಾತ ಸಂಭವಿಸಿತೆಂದರೆ ಒಬ್ಬಿಬ್ಬರ ಪ್ರಾಣಕ್ಕೆ ಎರವಾಯಿತು ಎಂದೇ ಅರ್ಥ. ತಿಂಗಳಿಗೊಂದೆರಡು ಅಪಘಾತ ಸಂಭವಿಸಿ, ಈ ಬೈಪಾಸ್ ಮೃತ್ಯುಕೂಪ ಎಂಬ ಅಪವಾದ ಕೇಳಿಬರುತ್ತಿದೆ.

    ಬೈಪಾಸ್​ಅನ್ನು ಅಗಲ ಮಾಡಿ ಷಟ್ಪಥವಾಗಿಸುವ ಮಾತು ಕೇಳಿಬಂದಿತ್ತು. ಆದರೆ, ಇದು ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಇದಕ್ಕೆ ಕಾರಣ, ಬೈಪಾಸ್ ಗುತ್ತಿಗೆದಾರ ಕಂಪನಿ ನಂದಿ ಹೈವೇ ಡೆವಲಪರ್ಸ್ ಲಿ. (ಎನ್​ಎಚ್​ಡಿಎಲ್) ಕಂಪನಿ ಎಂಬ ಆರೋಪ ಕೇಳಿಬರತೊಡಗಿದೆ.

    2024ರವರೆಗೆ: ಎನ್​ಎಚ್​ಡಿಎಲ್ 1998ರಲ್ಲಿ ಗುತ್ತಿಗೆ ಆಧಾರದಲ್ಲಿ ಬೈಪಾಸ್ ಪಡೆದಿದ್ದು, ಇದರ ಅವಧಿ 2024ರವರೆಗೆ ಇದೆ. 10 ಮೀ. ಅಗಲದ ಡಾಂಬರ್ ರಸ್ತೆಯಿದು. ಬೈಪಾಸ್ ಆರಂಭವಾದಾಗ ಕಡಿಮೆ ಇದ್ದ ವಾಹನಗಳ ದಟ್ಟಣೆ ಈಗ ಹತ್ತಾರು ಪಟ್ಟು ಹೆಚ್ಚಳವಾಗಿದೆ. ಆದರೆ ರಸ್ತೆಯ ಅಗಲ ಬಹುತೇಕ ಕಡೆಗಳಲ್ಲಿ ಅಷ್ಟೇ ಇದೆ.

    * ಇಕ್ಕಟ್ಟಾದ ಬೈಪಾಸ್: ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ವಾಹನಗಳಿಗೆ ಚತುಷ್ಪಥ ರಸ್ತೆ ಇದೆ. ಅಲ್ಲಲ್ಲಿ 6 ಪಥದ ರಸ್ತೆ ನಿರ್ವಣವಾಗಿದ್ದು, ಕೆಲವೆಡೆ ಹೆದ್ದಾರಿ ಅಗಲೀಕರಣದ ಕಾಮಗಾರಿ ಪ್ರಗತಿಯಲ್ಲಿದೆ. ಹೆದ್ದಾರಿಯಲ್ಲಿ ವಾಹನಗಳು ಭಾರಿ ವೇಗದಲ್ಲಿ ಸಂಚರಿಸುತ್ತವೆ. ಸವಾರರು ಅದೇ ವೇಗದ ಮನಸ್ಥಿತಿಯೊಂದಿಗೆ ಬೈಪಾಸ್​ಅನ್ನೂ ಪ್ರವೇಶಿಸುತ್ತಾರೆ. 30 ಕಿ.ಮೀ. ಬೈಪಾಸ್ ದ್ವಿಪಥ ರಸ್ತೆಯಾಗಿದೆ. ಸಿವಿಲ್ ಇಂಜಿನಿಯರಿಂಗ್ ಪರಿಭಾಷೆಯಲ್ಲಿ ಇದು ‘ಬಾಟಲ್ ನೆಕ್’.

    ಚತುಷ್ಪಥ ಹೆದ್ದಾರಿಯ ಮಧ್ಯೆ 30 ಕಿ.ಮೀ. ದ್ವಿಪಥ ಮಾರ್ಗ ಇರುವುದು ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಬೈಪಾಸ್ ದಾಟಲು ಶುಲ್ಕ ಬೇರೆ ಹೊರೆ. ಬೈಪಾಸ್​ನಲ್ಲೂ 6 ಪಥದ ರಸ್ತೆಯಾಗಬೇಕು ಎಂಬ ಬೇಡಿಕೆಗೆ ಎನ್​ಎಚ್​ಡಿಎಲ್ ಸುಲಭದಲ್ಲಿ ಒಪ್ಪುತ್ತಿಲ್ಲ. ಹೀಗಾಗಿ ಈಗಿನ ವಾಹನ ದಟ್ಟಣೆ ಮತ್ತು ಆಚೀಚೆ ಚತುಷ್ಪಥ ಹೆದ್ದಾರಿ ಇರುವುದರಿಂದ ಇದು ಅವೈಜ್ಞಾನಿಕ ಬೈಪಾಸ್ ಆಗಿ, ಇಡೀ ಸುವರ್ಣ ಚತುಷ್ಪಥ ಹೆದ್ದಾರಿಗೆ ಕಳಂಕಪ್ರಾಯವಾಗಿದೆ.

    ನಿಯಮಾವಳಿ ಸಲೀಸಲ್ಲ: ಈ ಹಿಂದೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಎನ್​ಎಚ್​ಡಿಎಲ್ ಸ್ವತಃ ಚತುಷ್ಪಥ ರಸ್ತೆ ನಿರ್ವಿುಸಬೇಕು ಅಥವಾ ಬೈಪಾಸ್​ಅನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಎರಡರಲ್ಲಿ ಒಂದು ತೀರ್ಮಾನ ಅಂತಿಮಗೊಳಿಸಿ ಎಂದು ಕೇಂದ್ರ ಭೂಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದರು.

    ಇದೇ ವಿಷಯವಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎನ್​ಎಚ್​ಡಿಎಲ್ ಕಂಪನಿಯೊಂದಿಗೆ ದೆಹಲಿಯಲ್ಲಿ 2-3 ಸಭೆ ನಡೆಸಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಪಾಸ್ ರಸ್ತೆಯನ್ನು ವಶಕ್ಕೆ ಪಡೆಯುವುದು ಅಷ್ಟು ಸಲೀಸಲ್ಲ. ಪೂರ್ತಿ ನಿಯಮಾವಳಿ ಪಾಲಿಸದೇ ಇದ್ದರೆ ಖಾಸಗಿ ಕಂಪನಿ ಕೋರ್ಟ್ ಕಟಕಟೆ ಹತ್ತದೇ ಬಿಡುವುದಿಲ್ಲ. ಗುತ್ತಿಗೆದಾರ ಕಂಪನಿಗೆ ಅಗಲೀಕರಣ ಬೇಕಾಗಿಲ್ಲ; ಬರೀ ಟೋಲ್ ಹಣ ಮಾತ್ರ ಬೇಕಾಗಿದೆ!

    ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆ ಅಗಲೀಕರಣ ಮಾಡದೇ, ಸರ್ಕಾರಕ್ಕೂ ಹಸ್ತಾಂತರಿಸಲು ಒಪ್ಪದೇ ಬಾಟಲ್ ನೆಕ್​ಅನ್ನು ಹಾಗೇ ಇಟ್ಟುಕೊಂಡಿರುವ ಖಾಸಗಿ ಕಂಪನಿ, ಪರೋಕ್ಷವಾಗಿ ಜೀವಹಾನಿಗೆ ಕಾರಣವಾಗುತ್ತಿದೆ.

    800 ಕೋಟಿ ರೂ.ಗೆ ಬೇಡಿಕೆ?: ಈ ರಸ್ತೆಯಲ್ಲಿ ಪ್ರತಿದಿನ 10 ಲಕ್ಷ ರೂ.ದಂತೆ ವಾರ್ಷಿಕ 36 ಕೋಟಿ ಟೋಲ್ ಸಂಗ್ರಹವಾಗುವ ಅಂದಾಜಿದೆ. ಗುತ್ತಿಗೆದಾರ ಕಂಪನಿ ಇನ್ನೂ 4 ವರ್ಷ ಅವಧಿ ಹೊಂದಿದೆ. ಅಂದರೆ 2024ರವರೆಗೆ 144 ಕೋಟಿ ರೂ. ಟೋಲ್ ಸಂಗ್ರಹವಾಗುವ ಅಂದಾಜಿದೆ. ಆದರೆ ಕಂಪನಿ ಬೈಪಾಸ್ ಬಿಟ್ಟು ಕೊಡಲು 600- 800 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಒಪ್ಪದ ಕೇಂದ್ರ- ರಾಜ್ಯ ಸರ್ಕಾರಗಳು ಪರಿಣತರು, ತಜ್ಞ ಸಲಹೆಗಾರರ ಅಭಿಪ್ರಾಯ ಪಡೆದು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿವೆ. ಸಕಾರಣವಿದ್ದರೆ ಬೈಪಾಸ್ ವಶಕ್ಕೆ ಪಡೆಯುವ ಅವಕಾಶವಿದೆ. ಆದರೆ, ಇನ್ನು ನಾಲ್ಕೇ ವರ್ಷ ಬಾಕಿ ಇರುವಾಗ ಎಲ್ಲ ಷರತ್ತುಗಳನ್ನು ಪಾಲಿಸುವುದು ಕಷ್ಟಸಾಧ್ಯ. ಗುತ್ತಿಗೆದಾರರು ಕೇಳಿದಷ್ಟು ಹಣ ಕೊಡುವುದು ವ್ಯಾವಹಾರಿಕವಲ್ಲ.

    ಹೀಗಾಗಿ, ಪರ್ಯಾಯ ಕ್ರಮಗಳ ಚಿಂತನೆ ಅನಿವಾರ್ಯ ಎಂಬ ಅಭಿಪ್ರಾಯ ಮೇಲ್ಮಟ್ಟದ ಅಧಿಕಾರಿಗಳದ್ದು. ಅಂಥ ಕಾರ್ಯಸಾಧುವಾದ ಬೇರೆ ಉಪಾಯ ಇನ್ನೂ ತೀರ್ವನವಾಗಿಲ್ಲ.

    ಸರ್ವೀಸ್ ರಸ್ತೆ ಪ್ರಸ್ತಾಪವಿಲ್ಲ?: 22 ವರ್ಷ ಹಿಂದೆ ಒಪ್ಪಂದ ಮಾಡಿಕೊಳ್ಳುವಾಗ ಸರ್ಕಾರಗಳು ಬೈಪಾಸ್ ಪಕ್ಕದಲ್ಲಿ ಸರ್ವೀಸ್ ರಸ್ತೆ ವಿಷಯದಲ್ಲಿ ಕಟ್ಟುನಿಟ್ಟಿನ ಷರತ್ತು ವಿಧಿಸಿಲ್ಲ ಎನ್ನಲಾಗಿದೆ. ಹೀಗಾಗಿ, ಸ್ಥಳೀಯ ವಾಹನಗಳಿಗೆ ಸರ್ವೀಸ್ ರಸ್ತೆಯನ್ನು ಗುತ್ತಿಗೆದಾರ ಕಂಪನಿ ನಿರ್ವಿುಸುತ್ತಿಲ್ಲ. ಜನಪ್ರತಿನಿಧಿಗಳು ಸರ್ವೀಸ್ ರಸ್ತೆ ಕುರಿತು ಆಗಾಗ ಪ್ರಸ್ತಾಪಿಸುತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

    ಸಾಕಷ್ಟು ವಿಚಾರ ಮಾಡದೇ ಖಾಸಗಿ ಕಂಪನಿಗೆ ಬೈಪಾಸ್ ಮಾಡಲು ಗುತ್ತಿಗೆ ಕೊಟ್ಟಿದ್ದು, ಸರ್ಕಾರಗಳಿಗೊಂದು ದೊಡ್ಡ ಪಾಠವಾಗಿದೆ.

    ಈ ಬೈಪಾಸ್ ಭಾರತದ ಪ್ರಥಮ ಖಾಸಗಿ ಒಡೆತನದ್ದು. ರಸ್ತೆ ಅಗಲೀಕರಣವಾಗದೆ ಅಪಘಾತಗಳು ಹೆಚ್ಚುತ್ತಿವೆ. ಬೈಪಾಸ್ ವಶಕ್ಕೆ ಪಡೆದು ಅಗಲೀಕರಣ ಮಾಡುವ ಸಂಬಂಧ 2- 3 ಸಭೆಗಳಾಗಿವೆ. ರಾಜ್ಯ ಹಾಗೂ ಕೇಂದ್ರ ಸಚಿವರೊಂದಿಗೆ ರ್ಚಚಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
    – ಅರವಿಂದ ಬೆಲ್ಲದ, ಶಾಸಕ

    ಎನ್​ಎಚ್​ಡಿಎಲ್ ಮಾಲೀಕ ಅಶೋಕ ಖೇಣಿಗೆ ಮನುಷ್ಯತ್ವವೇ ಇಲ್ಲ. ಇಷ್ಟೆಲ್ಲ ಅಪಘಾತ ಸಂಭವಿಸಿದರೂ ಬೈಪಾಸ್​ಅನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಿಲ್ಲ. 3 ವರ್ಷದಲ್ಲಿ 300ಕ್ಕಿಂತ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಚಿಕ್ಕ ಮಕ್ಕಳೂ ಬಲಿಯಾಗಿರುವುದು ಸೇರಿ ಪ್ರತಿ ಅಪಘಾತವೂ ಹೃದಯ ಕಲಕಿದೆ. ಭಾನುವಾರ ಅಪಘಾತವಾಗಿ ಸ್ವಾಮೀಜಿ ಮತ್ತು ಇತರ ಮೂವರು ಮೃತಪಟ್ಟಿದ್ದು ಸಹ ಅತ್ಯಂತ ದುಃಖದ ಸಂಗತಿ. ಚತುಷ್ಪಥ ಮಾಡುವ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ.
    – ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ

    ಬೈಪಾಸ್ ಆರಂಭದಲ್ಲೇ ಇದು 6 ಪಥದ ರಸ್ತೆ. ಮುಂದೆ ದ್ವಿಪಥವಿದೆ. ಹೆದ್ದಾರಿ ಪ್ರಾಧಿಕಾರದಿಂದ 6 ಪಥ ಮಾಡುವ ಪ್ರಸ್ತಾವನೆ ಇದೆ. ಆದರೆ ಎನ್​ಎಚ್​ಡಿಎಲ್ ಸಂಸ್ಥೆಯ ಗುತ್ತಿಗೆ ಅವಧಿ 2024ರವರೆಗೆ ಇದೆ. 6 ಪಥದ ರಸ್ತೆ ನಿರ್ವಣಕ್ಕೆ ಕಂಪನಿಯೊಂದಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ. ಸದ್ಯದಲ್ಲೇ ಪ್ರಾಧಿಕಾರದಿಂದ ರಸ್ತೆ ಅಗಲೀಕರಣ ಕಾಮಗಾರಿಯ ಡಿಪಿಆರ್ ಸಿದ್ಧಪಡಿಸಲಾಗುವುದು.
    – ವಸಂತ ನಾಯ್ಕ, ಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts