ಹಾವೇರಿ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 22ರಿಂದಲೇ ಸಂಪೂರ್ಣವಾಗಿ ಡಿಪೋ ಸೇರಿದ್ದ ಸಾರಿಗೆ ಸಂಸ್ಥೆಯ ಬಸ್ಗಳು ಸೋಮವಾರ ಮರಳಿ ರಸ್ತೆಗಿಳಿದಿವೆ.
ಸೋಮವಾರದಿಂದ ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರಿಂದ 65ಬಸ್ಗಳ ಸಂಚಾರವನ್ನು ಬೆಳಗ್ಗೆಯಿಂದ ಆರಂಭಿಸಲಾಯಿತು. ಮಧ್ಯಾಹ್ನದ ವೇಳೆಗೆ ಮತ್ತಷ್ಟು ಬೇಡಿಕೆ ಬಂದಿದ್ದರಿಂದ 8ಹೆಚ್ಚುವರಿ ಬಸ್ಗಳ ಓಡಾಟವನ್ನು ಆರಂಭಿಸಲಾಯಿತು. ಇದರಿಂದ ಗ್ರಾಮೀಣ ಪ್ರದೇಶಗಳಿಂದ ದುಡಿಯಲು ಬಂದು ನಗರಗಳಲ್ಲಿ ಲಾಕ್ ಆಗಿದ್ದ ಕಾರ್ವಿುಕರು ಬೆಳ್ಳಂಬೆಳಗ್ಗೆ ತಮ್ಮ ಸಾಮಾನು, ಸರಂಜಾಮುಗಳೊಂದಿಗೆ ಬಸ್ನಿಲ್ದಾಣಕ್ಕೆ ಆಗಮಿಸಿ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.
ಹೊರಜಿಲ್ಲೆಯವರ ಕ್ವಾರಂಟೈನ್: ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವ ಕಾರ್ವಿುಕರನ್ನು ಜಿಲ್ಲೆಯ 4 ತಾಣಗಳಲ್ಲಿ ಇಳಿಸಿ ಕ್ವಾರೆಂಟೈನ್ ವಾಚ್ಆಪ್ನಲ್ಲಿ ಮಾಹಿತಿ ನೋಂದಾಯಿಸಿಕೊಂಡು ಅವರವರ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ ಉತ್ತರಕರ್ನಾಟಕ ಭಾಗಕ್ಕೆ 35 ಬಸ್ಗಳು ಹೊರಟಿವೆ. ಭಾನುವಾರ ಹಾವೇರಿಗೆ ಎರಡು ಬಸ್ಗಳು ಬಂದಿವೆ. ಸೋಮವಾರ ಎಂಟು ಬಸ್ಗಳು ಬರಲಿವೆ ಎಂದು ಮಾಹಿತಿ ದೊರೆತಿದೆ.
ಈ ಪೈಕಿ ಹಾವೇರಿ ಜಿಲ್ಲೆಗೆ ಬರುವ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ಪ್ರಯಾಣಿಕರನ್ನು ಜಿಲ್ಲೆಯ ಮಾಕನೂರು ಚೆಕ್ಪೋಸ್ಟ್, ರಾಣೆಬೆನ್ನೂರ, ಹಾವೇರಿ ಹಾಗೂ ಶಿಗ್ಗಾಂವಿಯಲ್ಲಿ ಇಳಿಸಿಕೊಂಡು ಅಲ್ಲಿಂದ ಕ್ವಾರೆಂಟೈನ್ ವಾಚ್ ಆಪ್ ನಲ್ಲಿ ನೋಂದಾಯಿಸಿಕೊಂಡು ಸ್ಥಳೀಯ ಬಸ್ಗಳಲ್ಲಿ ಅವರವರ ಊರಿಗೆ ಕಳುಹಿಸಿಕೊಡಲಾಯಿತು.
ಪ್ರತಿ ಪ್ರಯಾಣಿಕರಿಗೆ ಹೋಮ್ ಕ್ವಾರೆಂಟೈನ್ ಸೀಲ್ಹಾಕಿ 14ದಿನ ಗೃಹಪ್ರತ್ಯೇಕತೆಯಲ್ಲಿರಿಸಿ ನಿಗಾ ವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಜಿಲ್ಲೆಯೊಳಗೆ ಬೆಳಗ್ಗೆಯೇ ಆರಂಭಗೊಂಡವು. ಪ್ರತಿ ತಾಲೂಕು ಕೇಂದ್ರದಿಂದ ಇನ್ನೊಂದು ತಾಲೂಕು ಕೇಂದ್ರಕ್ಕೆ ಹಾಗೂ ತಾಲೂಕು ಕೇಂದ್ರದಿಂದ ಹೋಬಳಿ ಕೇಂದ್ರಗಳಿಗೆ, ದೊಡ್ಡ ದೊಡ್ಡ ಗ್ರಾಮಗಳಿಗೆ ಆರಂಭಿಕವಾಗಿ ಬಸ್ ಸಂಚಾರ ಆರಂಭಿಸಲಾಯಿತು.
ಪ್ರತಿ ತಾಲೂಕಿನ ಡಿಪೋದಿಂದ 10ರಿಂದ 15ಬಸ್ಗಳ ಸಂಚಾರ ಆರಂಭಿಸಲಾಯಿತು. ಜನರ ಬೇಡಿಕೆಗೆ ಅನುಸಾರವಾಗಿ ಬಸ್ ಸಂಖ್ಯೆಗಳನ್ನು ಹೆಚ್ಚಳ ಮಾಡಲಾಗಿದೆ. ಬಸ್ನಲ್ಲಿ 24ರಿಂದ 25ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್, ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಬಸ್ನಿಲ್ದಾಣದಲ್ಲಿ ಪ್ರಯಾಣಿಕರ ಕೈ ತೊಳೆಯಲು ಸೋಪು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರ ಆರಂಭಿಸಲಾಗಿದೆ. ಬೇಡಿಕೆ ಇರುವ ಕಡೆಗಳಲ್ಲಿ ಮಾತ್ರ ಬಸ್ ಬಿಡಲಾಗಿದೆ. ಜಿಲ್ಲೆಗೆ ಒಂದು ಸಂಚಾರಿ ಫೀವರ್ ಕ್ಲಿನಿಕ್ ಬಸ್ನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಬಸ್ ಹುಬ್ಬಳ್ಳಿಯಲ್ಲಿ ಸಿದ್ಧವಾಗಿದ್ದು, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಮಂಗಳವಾರ ಇಲ್ಲವೇ ಬುಧವಾರದಿಂದ ಜಿಲ್ಲೆಯಲ್ಲಿ ಸಂಚಾರಿ ಫೀವರ್ ಕ್ಲಿನಿಕ್ ಬಸ್ ಸಹ ಸಂಚರಿಸಲಿದೆ.
| ಜಗದೀಶ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಹಾವೇರಿ