ಕಲಬುರಗಿ: ಕೋವಿಡ್ ಚಿಕಿತ್ಸಾ ಕೇಂದ್ರವಾಗಿರುವ ಜಿಮ್ಸ್ ಆಸ್ಪತ್ರೆಗೆ ಜಿಲ್ಲಾದಿಕಾರಿ ಶರತ್ ಬಿ., ಜಿಪಂ ಸಿಇಒ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಶನಿವಾರ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ಹಂದಿಗಳ ಸ್ಥಳಾಂತರ ಮತ್ತು ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಮೂಲಕ ವಿಜಯವಾಣಿ ಪ್ರಕಟಿಸಿದ ವರದಿಗೆ ಸ್ಪಂದಿಸಿದರು.
ಜಿಮ್ಸ್ ಆಸ್ಪತ್ರೆಯಲ್ಲಿ ಹಂದಿಗಳ ಕ್ಯಾಟ್ವಾಕ್ ತಲೆಬರಹದಡಿ ವಿಜಯವಾಣಿಯಲ್ಲಿ ವರದಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯಲ್ಲಿ ಶುಕ್ರವಾರ ವಿಷಯ ಬಿತ್ತರಗೊಂಡಿತ್ತು. ಇದನ್ನು ಗಮನಿಸುತ್ತಲೇ ಎಚ್ಚೆತ್ತ ಡಿಸಿ ಶರತ್, ದಂಡು ಕಟ್ಟಿಕೊಂಡು ಜಿಮ್ಸ್ಗೆ ದೌಡಾಯಿಸಿದರು.
ಇಡೀ ಆಸ್ಪತ್ರೆ ಆವರಣ ಸುತ್ತಾಡಿ ಗಲೀಜು ಇರುವುದನ್ನು ಗಮನಿಸಿದರು. ಹಂದಿಗಳು ಆಸ್ಪತ್ರೆಯೊಳಗೆ ಓಡಾಡುತ್ತಿದ್ದರೂ ಕ್ಯಾರೆ ಎನ್ನದ ಮನೋಭಾವ ಕಂಡು ಸಿಡಿಮಿಡಿಗೊಂಡರು. ಜಿಮ್ಸ್ ವೈದ್ಯಕೀಯ ಅಧೀಕ್ಷಕರು ಹಾಗೂ ಡಿಎಸ್ ಅವರನ್ನು ತರಾಟೆಗೆ ತೆಗೆದುಕೊಂಡು ಆಸ್ಪತ್ರೆ ಶುಚಿ ಆಗಿರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಆವರಣದಲ್ಲಿ ಓಡಾಡುತ್ತಿರುವ ಹಂದಿಗಳನ್ನು ಕೂಡಲೇ ಸ್ಥಳಾಂತರಿಸಿ ಹಂದಿ ಸಾಕಿರುವ ಮಾಲೀಕರ ವಿರುದ್ಧ ಕೇಸ್ ದಾಖಲಿಸುವಂತೆ ಡಿಸಿ ಸೂಚನೆ ನೀಡಿದರು. ಬೆನ್ನಲ್ಲೇ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಸ್ಪತ್ರೆ ಆವರಣದಲ್ಲಿದ್ದ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಿದರು.
ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಮಹ್ಮದ್ ಶಫಿಯುದ್ದೀನ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಎಸಿಪಿ ವಿಜಯಕುಮಾರ ಇತರರಿದ್ದರು.