ಯಲ್ಲಾಪುರ: ಬಡವರ ಅತಿಕ್ರಮಣವನ್ನು ತೆರವುಗೊಳಿಸುವ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಸಂಸದರು, ಸಚಿವರು ಹಾಗೂ ಶಾಸಕರ ಅತಿಕ್ರಮಣ ತೆರವಿಗೆ ಏಕೆ ಮುಂದಾಗುತ್ತಿಲ್ಲ ಎಂದು ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ಎ. ರವೀಂದ್ರನಾಥ ನಾಯ್ಕ ಪ್ರಶ್ನಿಸಿದರು.
ಗುಳ್ಳಾಪುರದ ಅತಿಕ್ರಮಣದಾರ ಮಹಿಳೆ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಸೋಮವಾರ ಪಟ್ಟಣದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಅರಣ್ಯ ಭೂಮಿ ಅತಿಕ್ರಮಿಸಿ ಸಾಗುವಳಿ ಮಾಡುತ್ತಿರುವ ಈರಮ್ಮ ದೇವರಾಜ ಆಚಾರಿ ಎಂಬುರ ಮೇಲೆ ದೌರ್ಜನ್ಯ ನಡೆಸಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಾರಣ ಆ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಬೇಕು. ಕಾನೂನು ಬಾಹಿರ ಅಪರಾಧ ಕೃತ್ಯವೆಸೆಗಿದ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ತಾಲೂಕು ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ಸಂಚಾಲಕರಾದ ರಾಘವೇಂದ್ರ ನಾಯ್ಕ, ವಿಜಯ ಸಿದ್ದಿ, ಹಬೀಬ್ ಕಿರವತ್ತಿ, ನೂರಹಮ್ಮದ್ ಮದನೂರು, ಅನಂತ ಗೌಡ ಮಾವಿನಮನೆ, ಗಣಪತಿ ಕುಣಬಿ ಬಾರೇ, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಗೋಪಾಲ ಗೌಡ ಹಿತ್ಲಕೊಪ್ಪ ಇತರರಿದ್ದರು.