ಹಾವೇರಿ: ಛತ್ರಪತಿ ಶಿವಾಜಿ ಮಹಾರಾಜರು ಸದಾ ನಮಗೆ ಪ್ರೇರಣೆ ಕೊಡಬಲ್ಲ ಶಕ್ತಿ ಸಾಧಕರು. ಭಾರತದ ಪರಂಪರೆಯನ್ನು ಉಳಿಸಿ ಮರುಸ್ಥಾಪಿಸಿದ ಧೀಮಂತರು. ಇಂಥ ಅಪ್ರತಿಮ ದೇಶಭಕ್ತನ ಜಯಂತಿ ಮಾಡುವುದರಿಂದ ನಮಗೂ ಧೈರ್ಯ, ಆತ್ಮಸ್ಥೈರ್ಯ ತುಂಬಿಕೊಳ್ಳಲು ಸಹಾಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ಪಟ್ಟಣದ ಕ್ಷತ್ರೀಯ ಮರಾಠ ಸಮಾಜದ ಶಹರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಇಲ್ಲಿಯ ಸಂತೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರ ಕುಲಕ್ಕೆ ಸೇರಿರುವಂತಹ ಎಲ್ಲ ಕ್ಷತ್ರೀಯರು ಅತ್ಯಂತ ಅಭಿಮಾನದಿಂದ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎಲ್ಲ ವರ್ಗ, ಎಲ್ಲ ಭಾಷಿಕರು, ಎಲ್ಲ ಪಂತಗಳನ್ನು ಸಮನಾಗಿ ನೋಡುವಂತಹ ಪರಂಪರೆಯನ್ನು ನಮ್ಮ ಹಿರಿಯರು ಮೊದಲಿಂದಲೂ ಹಾಕಿ ಕೊಟ್ಟಿದ್ದಾರೆ. ಆದರೆ, ನಮ್ಮಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಅಗ್ರಸ್ಥಾನ. ಯಾರು ಕನ್ನಡದ ಮಣ್ಣಿನಲ್ಲಿದ್ದಾರೋ ಅವರೆಲ್ಲರೂ ಕನ್ನಡಿಗರು ಎನ್ನುವ ಭಾವನೆ ನಮ್ಮದು ಎಂದರು.
ಮರಾಠ ಅಭಿವೃದ್ಧಿ ಮಂಡಳಿಯಿಂದ ಹತ್ತಾರು ಕಾರ್ಯಕ್ರಮ ರೂಪಿಸಿದ್ದೇನೆ. ಶಿಗ್ಗಾಂವಿ-ಸವಣೂರಿನ ಅಭಿವೃದ್ಧಿಗೆ ಈಗಾಗಲೇ ನೂರಾರು ಕೋಟಿ ರೂ. ಅನುದಾನ ನೀಡಿದ್ದೇನೆ. ಕಾಮಗಾರಿಗಳು ಆರಂಭಗೊಂಡಿವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಿದ್ದೇನೆ. ಎಲ್ಲ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಶಿಗ್ಗಾಂವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಸುಭಾಸ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. 52 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಒ ಆಕಾಶ ಶ್ರೀಧರ, ಕೆಸಿಸಿ ಬ್ಯಾಂಕ ನಿರ್ದೇಶಕ ಗಂಗಣ್ಣ ಸಾತಣ್ಣವರ, ಕರ್ನಾಟಕ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷ ಉದಯಸಿಂಗ್, ಮಾಜಿ ಸಂಸದ ಮಂಜುನಾಥ ಕುನ್ನೂರ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮತ್ತಿತರರಿದ್ದರು.